ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಶಂಕಿತ ಉಗ್ರ, ವಿಕೃತ ಕಾಮಿ ಉಮೇಶ್ ರೆಡ್ಡಿ ಚಿನ್ನದ ಸ್ಮಗ್ಲರ್ ಮುಂತಾದ ಕ್ರಿಮಿನಲ್ ಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಮತ್ತೆ ಸುದ್ದಿಯಾಗಿದೆ.
ಹೌದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕ್ರಿಮಿನಲ್ ಗಳಿಗೆ ರಾಜಾತಿಥ್ಯ ನೀಡುತ್ತಿರುವ ವೀಡಿಯೋ ಹಾಗೂ ಫೋಟೊಗಳು ಹರಿದಾಡುತ್ತಿದ್ದು, ಪೊಲೀಸರಿಗೆ ಲಂಚ ಕೊಟ್ಟರೆ ಜೈಲಲ್ಲಿ ಯಾವ ಸೇವೆ ಬೇಕಾದರೂ ಸಿಗುತ್ತದೆ ಎಂಬುದು ಸಾಬೀತಾಗಿದೆ.
ಪರಪ್ಪನ ಅಗ್ರಹಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೋಸ್ಟ್ ವಾಂಟೆಡ್, ಐಸಿಸ್ ಉಗ್ರ (ISIS Terrorist) ಜುಹಾದ್ ಹಮೀದ್ ಶಕೀಲ್ ಮನ್ನಾಗೆ ರಾಜಾತಿಥ್ಯ ನೀಡಿರುವುದು ವೈರಲ್ ಆಗಿರುವ ವಿಡಿಯೋದಿಂದ ಬೆಳಕಿಗೆ ಬಂದಿದೆ.
ಶಕೀಲ್ ರಾಜಾರೋಷವಾಗಿ ಜೈಲಿನಲ್ಲಿ ಮೊಬೈಲ್ ಫೋನ್ ಇಟ್ಕೊಂಡು ಮಾತನಾಡುತ್ತಿರೋದು ವಿಡಿಯೋದಲ್ಲಿ ಗೊತ್ತಾಗಿದೆ. ಹೀಗಾಗಿ ಬೆಂಗಳೂರು ಸೆಂಟ್ರಲ್ ಜೈಲು (Bengaluru Central Jail) ಭಯೋತ್ಪಾದಕರಿಗೂ ಸ್ವರ್ಗವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ.
ಬೆಂಗಳೂರಿನ ತಿಲಕ್ನಗರದವನಾದ ಜುಹಾದ್ ಹಮೀದ್ ಶಕೀಲ್ ಮೂಲಭೂತವಾದಿ ಮನಸ್ಥಿತಿಯುಳ್ಳ ಮುಸ್ಲಿಂ ಯುವಕರನ್ನ ಐಸಿಸ್ಗೆ ನೇಮಕ ಮಾಡ್ತಿದ್ದ. ʻಇಕ್ರಾ ಸರ್ಕಾಲ್ʼ ಹೆಸರಿನಲ್ಲಿ ಆನ್ಲೈನ್ ಗ್ರೂಪ್ ರಚಿಸಿ ಉಗ್ರರ ಸಂಘಟನೆಗೆ ನೇಮಕಾತಿ ನಡೆಸುತ್ತಿದ್ದ. ಅದರಂತೆ ಬೆಂಗಳೂರಿನ ನಾಲ್ವರನ್ನೂ ಸಿರಿಯಾಗೆ ಕರೆದೊಯ್ದಿದ್ದ. ಆದ್ರೆ ಟರ್ಕಿಯ ಇಸ್ತಾಂಬುಲ್ ರೆಫ್ಯೂಜಿ ಕ್ಯಾಂಪ್ನಲ್ಲೇ ಇಬ್ಬರು ಮೃತಪಟ್ಟಿದ್ದರು.
ಸಿರಿಯಾ ದೇಶಾದ್ಯಂತ ಐಸಿಸ್ ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದ ಶಕೀಲ್ನನ್ನ 2020ರಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು. 2022ರಲ್ಲಿ ಸೌದಿಯಿಂದ ಭಾರತಕ್ಕೆ ಗಡೀಪಾರಾಗಿದ್ದ. ಸದ್ಯ ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿ ಶಕೀಲ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದ್ರೆ ಶಿಕ್ಷೆಗೆ ಗುರಿಯಾಗಿರುವ ಕೈದಿ ಬಿಂದಾಸ್ ಲೈಫ್ ನಡೆಸುತ್ತಿರೋದು ಕಾನೂನು ಸುವ್ಯಸ್ಥೆ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.
ಉಮೇಶ್ ರೆಡ್ಡಿ, ರನ್ಯಾ ರಾವ್ ಸ್ನೇಹಿತನಿಗೆ ರಾಜಾತಿಥ್ಯ
ಇದೇ ವೇಳೆ 20 ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಬಂಧನ ಆಗಿರುವ ನಟಿ ರನ್ಯಾ ರಾವ್ ಪ್ರಿಯಕರ ತರುಣ್ ರಾಜ್ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ವೀಡಿಯೊಗಳು ಬೆಳಕಿಗೆ ಬಂದಿವೆ.
ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೆಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ. ವಿಕೃತ ಕಾಮಿಗೆ ಜೈಲಿನಲ್ಲಿ ಟಿವಿ, ಮೊಬೈಲ್ ಸೌಭಲಭ್ಯ ನೀಡಲಾಗಿದೆ. ಜೊತೆಗೆ ತನಗೆ ಬೇಕಾದ ಅಡುಗೆ ಮಾಡಿಕೊಳ್ಳಲು ಜೈಲಿನೊಳಗೇ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ. ಉಮೇಶ್ ರೆಡ್ಡಿ ಟಿವಿ ನೋಡ್ತಾ, ಆಂಡ್ರಾಯ್ಡ್ ಮತ್ತು ಕೀಪ್ಯಾಡ್ ಮೊಬೈಲ್ ಗಳನ್ನಿಟ್ಟುಕೊಂಡು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಇದರಿಂದ ಸೌಲಭ್ಯ ಕೊಟ್ಟ ಜೈಲಾಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಬಂಧನ ಆಗಿರುವ ರನ್ಯಾ ರಾವ್ ಪ್ರಿಯಕರ ತೆಲುಗು ಸಿನಿಮಾ ನಟ ತರುಣ್ ರಾಜ್ ಕೂಡ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾನೆ. ಮೊಬೈಲ್ ಜೊತೆಗೆ ಟಿವಿ ಸೌಲಭ್ಯ ಕಲ್ಪಿಸಿರೋದು ವೈರಲ್ ಆಗಿರುವ ವಿಡಿಯೋದಿಂದ ಗೊತ್ತಾಗಿದೆ.
ಒಟ್ಟಿನಲ್ಲಿ ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ಸಿಬ್ಬಂದಿಗೆ ಈಗ ಸಂಕಷ್ಟ ಎದುರಾಗಿದ್ದು, ಮುಂದಿನ ಕ್ರಮ ಕಾದುನೋಡಬೇಕಿದೆ.
1998 ರ ಫೆ. 28 ರಂದು ಬೆಂಗಳೂರು ನಗರದಲ್ಲಿ ನಡೆದಿದ್ದ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿ ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯಕ್ಕೆ ಪೆರೋಲ್ ಸೇರಿದಂತೆ ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕು ಎಂದಾದರೆ ಕನಿಷ್ಟ 30 ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.


