ಆಂಧ್ರಪ್ರದೇಶ ಪೊಲೀಸರು ನಾನಾ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ 12 ಜನರನ್ನು ಬಂಧಿಸಿದ್ದಾರೆ ಬಂಧಿತರಲ್ಲಿ ಆಂಧ್ರದ ಮೂವರು ಸೇರಿದ್ದು, ವಿಜಯವಾಡ ನಗರದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಉಗ್ರಗಾಮಿ ಸಿದ್ಧಾಂತದ ಪ್ರಚಾರ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ.
ಶಂಕಿತರು ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜೊತೆ ಸಂಪರ್ಕ ಹೊಂದಿರುವ ವಿದೇಶಿ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು. ಮೂವರು “ಅಲ್ ಮಲಿಕ್ ಇಸ್ಲಾಮಿಕ್ ಯೂತ್” ಎಂಬ ಗುಂಪು ರಚಿಸಿಕೊಂಡು ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವುದು, ಜಿಹಾದ್ಗೆ ಸಿದ್ಧಪಡಿಸುತ್ತಿದ್ದರು. ದೇಶಾದ್ಯಂತ ಜಾಲ ವಿಸ್ತರಿಸುವ ಗುರಿ ಹೊಂದಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ರಹಮತುಲ್ಲಾ ಅಂತರರಾಷ್ಟ್ರೀಯ ಭಯೋತ್ಪಾದಕ ನಾಯಕರ ದ್ವೇಷ ಭಾಷಣಗಳಿಂದ ಪ್ರಭಾವಿತನಾಗಿದ್ದ. ಸಾಮಾಜಿಕ ಮಾಧ್ಯಮದಲ್ಲಿ ಉಗ್ರಗಾಮಿ ವಿಷಯವನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದ ಮತ್ತು ಹಂಚಿಕೊಂಡಿದ್ದ. ಈತ ಅಲ್-ಹಕೀಮ್ ಶುಕೂರ್ ಎಂದು ಗುರುತಿಸಲಾದ ವಿದೇಶಿ ಹ್ಯಾಂಡ್ಲರ್ನೊಂದಿಗೆ ಸಂಪರ್ಕ ಬೆಳೆಸಿದ್ದ ಎಂಬುದು ಪತ್ತೆಯಾಗಿದೆ.
ಐಸಿಸ್-ಸಂಬಂಧಿತ “ಬೆನೆಕ್ಸ್ ಕಾಮ್” ಗುಂಪಿನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳೊಂದಿಗೆ ಮೂವರೂ ಆರೋಪಿಗಳು ಸಂಪರ್ಕ ಸಾಧಿಸಿದ್ದರು. ಅವರಲ್ಲಿ ಅಜ್ಮಾನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹ್ಮದ್ (ದೆಹಲಿ), ಮಿರ್ ಆಸಿಫ್ ಅಲಿ (ಪಶ್ಚಿಮ ಬಂಗಾಳ), ಜೀಶನ್ (ರಾಜಸ್ಥಾನ), ಅಬ್ದುಲ್ ಸಲಾಮ್ (ಕರ್ನಾಟಕ), ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ (ಮಹಾರಾಷ್ಟ್ರ) ಸೇರಿದ್ದಾರೆ ಎಂದು ಅಧಿಕಾರಿಗಳಳು ತಿಳಿಸಿದ್ದಾರೆ.
ಉಗ್ರಗಾಮಿ ಸಿದ್ಧಾಂತವನ್ನು ಉತ್ತೇಜಿಸಲು ಮತ್ತು ಯುವಕರನ್ನು ನೇಮಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಆರೋಪಿಗಳು ಬಳಸುತ್ತಿದ್ದರು. ಮೂವರು ತಮ್ಮನ್ನು ಮುಜಾಹಿದ್ದೀನ್ ಎಂದು ಬಿಂಬಿಸುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಒಸಾಮಾ ಬಿನ್ ಲಾಡೆನ್ನ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ರಾಷ್ಟ್ರಧ್ವಜವನ್ನು ಐಸಿಸ್ ಧ್ವಜದೊಂದಿಗೆ ಬದಲಾಯಿಸಿದ್ದಾರೆ. ರಾಷ್ಟ್ರಗೀತೆಯನ್ನು ಅಣಕಿಸಿದ್ದಾರೆ, ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ್ದಾರೆ, ಐಸಿಸ್ನ್ನು ಹೊಗಳಿದ್ದಾರೆ ಮತ್ತು ನಾಸ್ತಿಕರ ವಿರುದ್ಧ ದ್ವೇಷವನ್ನು ಹರಡಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿದ್ದು, ತನಿಖೆ ಮುಂದುವರಿದಿದೆ.


