ಮುಂಬೈನಲ್ಲಿ 2006ರಲ್ಲಿ ನಡೆದ ಸರಣಿ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಸಾಕ್ಷ್ಯಾಧಾರಗಳ ಕೊರತೆ ಹಾಗೂ ಆರೋಪ ಸಾಬೀತುಪಡಿಸುವಲ್ಲಿ ಸರ್ಕಾರದ ವೈಫಲ್ಯದ ಹಿನ್ನೆಲೆಯಲ್ಲಿ 12 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದರಲ್ಲಿ ಇಬ್ಬರು ಆರೋಪಿಗಳ ಮೇಲೆ ಇತರ ಯಾವುದೇ ಪ್ರಕರಣ ಇಲ್ಲದ ಕಾರಣ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
2006 ರೈಲು ಸ್ಫೋಟ ಪ್ರಕರಣದಲ್ಲಿ 189 ಜನ ಮೃಪತಟ್ಟಿದ್ದು, 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ಎಲ್ಲಾ 12 ಅಪರಾಧಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದೆ.
ಆರೋಪಿಗಳು ಈಗಾಗಲೇ 18 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ವಿಶೇಷ ನ್ಯಾಯಾಲಯವು ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದರೂ, ರಾಜ್ಯ ಸರ್ಕಾರವು ಅದರ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿರಲಿಲ್ಲ. ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾಗ ಸಾವನ್ನಪ್ಪಿದ್ದ.
2006ರ ಜುಲೈ 11ರಂದು ಮುಂಬೈ ರೈಲುಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 188ಮಂದಿ ಬಲಿಯಾಗಿದ್ದರು. ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಆರೋಪಿಗಳು.
ಎಟಿಎಸ್ ಚಾರ್ಜ್ಶೀಟ್ ಪ್ರಕಾರ, ರೈಲುಗಳಲ್ಲಿ ಸರಣಿ ಸ್ಫೋಟಕ್ಕೆ ಬಳಸಲಾದ ಬಾಂಬ್ಗಳನ್ನು ಮುಂಬೈ ಹೊರವಲಯದ ಗೋವಾಂಡಿ ಪ್ರದೇಶದಲ್ಲಿರುವ ಕೊಠಡಿಯೊಂದರಲ್ಲಿ ತಯಾರಿಸಲಾಗಿತ್ತು. ಈ ವೇಳೆ ಹಲವು ಪಾಕ್ ಮೂಲದ ಪ್ರಜೆಗಳು ಹಾಜರಿದ್ದರು. ಆರ್ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಮಿಶ್ರಣವನ್ನು ಸ್ಫೋಟಕ್ಕೆ ಬಳಸಲಾಗಿತ್ತು.
ಈ ಮಿಶ್ರಣವನ್ನು 7 ಪ್ರತ್ಯೇಕ ಬ್ಯಾಗ್ಗಳಲ್ಲಿ ತುಂಬಿ, ಚರ್ಚ್ಗೇಟ್ನಿಂದ ಹೊರಟಿದ್ದ ರೈಲುಗಳಲ್ಲಿ ಇರಿಸಲಾಗಿತ್ತು. ಖಾರ್ರಸ್ತೆ-ಸಾಂತಾಕ್ರೂಜ್, ಬಾಂದ್ರಾ-ಖಾರ್ ರಸ್ತೆ, ಜೋಗೇಶ್ವರಿ-ಮಾಹಿಮ್ ಜಂಕ್ಷನ್, ಮೀರಾ ರಸ್ತೆ-ಭಯೇಂದರ್, ಮಾತುಂಗ-ಮಾಹಿಮ್ ಜಂಕ್ಷನ್ ಮಾರ್ಗಗಳ ಮಧ್ಯೆ ರೈಲುಗಳಲ್ಲಿ ಸ್ಫೋಟ ಸಂಭವಿಸಿತ್ತು.