ಬೆಟ್ಟಿಂಗ್ ಅಥವಾ ಜೂಜಿಗಾಗಿ ಆಡದೆ ಮನರಂಜನೆ ಮತ್ತು ವಿನೋದಕ್ಕಾಗಿ ಇಸ್ಪೀಟು ಆಡುವುದು ನೈತಿಕ ಅಧಃಪತನವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕದ ‘ಸರ್ಕಾರಿ ಪಾಸಲನ್ ಕಾರ್ಖಾನೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ’ದ ಆಡಳಿತ ಮಂಡಳಿಗೆ ಚುನಾಯಿತರಾದ ಹನುಮಂತರಾಯಪ್ಪ ವೈ.ಸಿ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೇಶ್ವರ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪನ್ನು ನೀಡಿದೆ. ರಸ್ತೆಬದಿಯಲ್ಲಿ ಕೆಲವರೊಂದಿಗೆ ಇಸ್ಪೀಟು ಆಡುತ್ತಿದ್ದ ಹನುಮಂತರಾಯಪ್ಪ ಅವರಿಗೆ ಯಾವುದೇ ವಿಚಾರಣೆ ನಡೆಸದೆ ₹200 ದಂಡ ವಿಧಿಸಲಾಗಿತ್ತು. ಹನುಮಂತರಾಯಪ್ಪ ಜೂಜಾಡುವ ವ್ಯಕ್ತಿಯಲ್ಲ. ಮನರಂಜನೆಗಾಗಿ ಆಡುವ ಇಸ್ಪೀಟು ಆಟವು ನೈತಿಕ ಅಧಃಪತನಕ್ಕೆ ಕಾರಣವಾಗುವುದಿಲ್ಲ. ಭಾರತದ ಹಲವೆಡೆ ಜೂಜು ಇಲ್ಲದೆ ಇಸ್ಪೀಟು ಆಡುವುದು ಬಡವರಿಗೆ ಮನರಂಜನೆಯ ಮಾರ್ಗವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹನುಮಂತರಾಯಪ್ಪ ಅತಿಹೆಚ್ಚು ಮತಗಳೊಂದಿಗೆ ಚುನಾಯಿತರಾಗಿದ್ದರು. ಆದರೆ ಜೂಜಿನ ಆರೋಪದ ಮೇರೆಗೆ ಚುನಾವಣೆಯಲ್ಲಿ ಸೋತ ರಂಗನಾಥ ಬಿ. ಎಂಬವರು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಆಕ್ಷೇಪ ಸಲ್ಲಿಸಿದ್ದರು. ಈ ಆಧಾರದ ಮೇಲೆ ಹನುಮಂತರಾಯಪ್ಪ ಅವರ ಆಯ್ಕೆಯನ್ನು ರದ್ದುಗೊಳಿ ಸಲಾಗಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ್ದ ಈ ತೀರ್ಪನ್ನು ಪ್ರಶ್ನಿಸಿ ಹನುಮಂತರಾಯಪ್ಪ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆಯ್ಕೆಯ ರದ್ದು ಶಿಕ್ಷೆಯು ಆರೋಪಿತ ತಪ್ಪಿಗಿಂತ ತೀವ್ರ ಸ್ವರೂಪದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿ ಅವರ ಆಯ್ಕೆಯನ್ನು ಮರುಸ್ಥಾಪಿಸಿದೆ.