ವಿಜಯಪುರ ನಗರದ ಯೋಗಾಪೂರ ಶ್ರೀಸತ್ಯ ಸಾಯಿಬಾಬಾ ಶಾಲೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, 5ನೇ ತರಗತಿ ಬಾಲಕನ ಮೇಲೆ 9ನೇ ತರಗತಿ ಬಾಲಕರಉ ಹಲ್ಲೆ ನಡೆಸಿದ್ದರಿಂದ ಅಸ್ವಸ್ಥಗೊಂಡ ಬಾಲಕ ಮೃತಪಟ್ಟಿದ್ದಾನೆ.
ಹಲ್ಲೆ ನಡೆದ 5 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಬಾಲಕ ಅಸು ನೀಗಿದ್ದು, ಶಾಲೆ ಎದುರು ಬಾಲಕನ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. 5ನೇ ತರಗತಿಯ ಅನ್ಸ್ (11) ಮೃತಪಟ್ಟ ವಿದ್ಯಾರ್ಥಿ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ್ ಮೂಲದ ಸುನೀಲ್ ಪುತ್ರ ಅನ್ಸ್ ಕೈಯಲ್ಲಿದ್ದ ವಾಚ್ ಗಾಗಿ ಗಲಾಟೆ ನಡೆದು ಆತನಿಗೆ ಥಳಿಸಿ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ವಾಚ್ ಕಿತ್ತುಕೊಂಡಿದ್ದರು. ಈ ವೇಳೆ ನಡೆದ ಹಲ್ಲೆಯಿಂದ ಆತ ಅಸ್ವಸ್ಥಗೊಂಡಿದ್ದ. ಕುಟುಂಬದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಈ ವಿಚಾರ ಶಾಲಾ ಮುಖ್ಯಸ್ಥರಿಗೆ ಹೇಳಿದರೂ ಗಮನಕ್ಕೆ ತೆಗೆದುಕೊಂಡಿಲ್ಲ. ನಿಮ್ಮ ಮಗ ಸತ್ತಿದ್ದಾನಾ ಎಂದು ಅನ್ಸ್ ತಂದೆ ತಾಯಿಯನ್ನು ಶಾಲಾ ಮುಖ್ಯಸ್ಥರು ಬೈದು ಕಳಿಸಿದ್ದರು.
ಬಾಲಕ ಸತ್ತ ಬಳಿಕ ಪೋಷಕರು ಶಾಲೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿ, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಮಗ ಪ್ರಾಣ ಕಳೆದುಕೊಂಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ್ ಯಲಿಗಾರ್, ಗಾಂಧಿ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ಕುಟುಂಬಸ್ಥರ ಮನವೊಲಿಕೆಗೆ ಯತ್ನಿಸಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹದೊಂದಿಗೆ ಹಲ್ಲೆ ನಡೆಸಿರುವ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.