ಬಳ್ಳಾರಿಯ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ವಾರ್ಡನ್ ಸೇರಿ ಹಲವು ಬಾಲಕರ ಮೇಲೆ ಒಂಬತ್ತನೇ ತರಗತಿ ವಿದ್ಯಾರ್ಥಿಯು ರಾಡ್ನಿಂದ ಹಲ್ಲೆ ನಡೆಸಿದ್ದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಡ್ನಿಂದ ಹೊಡೆದಿದ್ದಾಗಿ ಶಾಲಾ ಆಡಳಿತ ಮಂಡಳಿ ಹೇಳುತ್ತಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಸಂಶಯವಿದ್ದು, ಅಷ್ಟು ಹುಡುಗರ ಮೇಲೆಒಬ್ಬನೇ ಹಲ್ಲೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು, ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಮೃತ ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.
ಹಾಸ್ಟೆಲ್ ಆಡಳಿತ ಮಂಡಳಿ ನಂಬಿ ಮಕ್ಕಳನ್ನು ಬಿಟ್ಟಿದ್ದೇವೆ. ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಬಾಲಕರ ನಡುವೆ ಇದಕ್ಕೂ ಮೊದಲುಏನು ನಡೆದಿತ್ತು ಎನ್ನುವುದೇ ಗೊತ್ತಿಲ್ಲ. ರಾತ್ರಿ ದೂರವಾಣಿ ಕರೆ ಬಂದ ಹಿನ್ನೆಲೆ ಇಲ್ಲಿಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ತಿಳಿಯಿತು. ವಿದ್ಯಾರ್ಥಿ ಕೈಗೆ ಮಾರಕಾಸ್ತ್ರ ಸಿಕ್ಕಿದ್ದು ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಪ್ರೇಯಸಿ ಸೇರಿ ಮೂವರಿಗೆ ಬೆಂಕಿ ಹಚ್ಚಿದ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪ್ರೇಯಸಿ ಸೇರಿದಂತೆ ಮೂವರ ಮೇಲೆ ಪೆಟ್ರೋಲ್ ಸುರಿದು ವ್ಯಕ್ತಿ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಬನಹಳ್ಳಿಯಲ್ಲಿ ನಡೆದಿದೆ. ಆರೋಪಿಯ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ(48) ಹಾಗೂ ತಾಯಿ ಮಂಜಮ್ಮ(42) ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಪಾಂಡುರಂಗ(29)ನನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದ ಸುಮಲತಾ, ಯಶವಂತಪುರದ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಳು. ಇನ್ಸ್ಟಾಗ್ರಾಂನಲ್ಲಿ ಪಾಂಡುರಂಗನ ಪರಿಚಯವಾಗಿತ್ತು. ಆತನ ಜೊತೆಗೆ ಮನೆ ಬಿಟ್ಟು ಹೋಗಿದ್ದ ಸುಮಲತಾ, ನಾಲ್ಕು ವರ್ಷದಿಂದ ಮಹಾಲಕ್ಷ್ಮೀ ಲೇಔಟ್ನಲ್ಲಿ ಆತನೊಂದಿಗೆ ವಾಸವಿದ್ದಳು. ಆತನ ಜೊತೆ ಜಗಳವಾಗಿ ಎರಡು ತಿಂಗಳ ಹಿಂದೆ ದೂರವಾಗಿದ್ದಳು. ಪಾಂಡುರಂಗ ಮತ್ತೊಂದು ಯುವತಿಯ ಸಹವಾಸ ಮಾಡಿದ್ದ ಕಾರಣ ಗಲಾಟೆ ಮಾಡಿ ಮನೆಗೆ ವಾಪಸಾಗಿದ್ದಳು.
ತರಬನಹಳ್ಳಿಯ ಸುಮಲತಾ ಮನೆ ಬಳಿ ಬಂದಿದ್ದ ಆರೋಪಿ ಪಾಡುರಂಗ ಸುಮಲತಾಳಿಗೆ ದ್ವಿಚಕ್ರ ವಾಹನ ಕೊಡು ಎಂದಿದ್ದ. ಕೊಡಲ್ಲ ಎಂದು ಸುಮಲತಾ ಹೇಳಿದ್ದಾಳೆ. ಸಿಟ್ಟಿಗೆದ್ದ ಆರೋಪಿ ಗಲಾಟೆ ಮಾಡಿ ಸ್ಥಳದಿಂದ ತೆರಳಿ ಅರ್ಧಗಂಟೆ ಬಳಿಕ ವಾಪಾಸ್ ಬಂದು ಸುಮಲತಾ ಮತ್ತು ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆಟೋದಲ್ಲಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


