ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಡೋಂಗಿ. ಹೆಚ್ಚೆಚ್ಚು GST ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.
ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ದಸರಾ ಆಹಾರ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ , “ಎಂಟು ವರ್ಷಗಳಿಂದ ಹೆಚ್ಚಾಗಿ ಜಿಎಸ್ಟಿ ವಸೂಲಿಸಿದ ಮೋದಿ, ಈಗ ಅದನ್ನು ಹಿಂದಿರುಗಿಸಲಿದ್ದಾರೆನಾ?” ಎಂದು ಪ್ರಶ್ನಿಸಿದರು.
“GST ಜಾರಿ ಮಾಡಿದ್ದೂ ಮೋದಿ. GST ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ
ನಾವು 18% ಮತ್ತು 28% ಗೆ ಹೆಚ್ಚುವರಿ ಜಿಎಸ್ಟಿ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದೇವೆ. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತಗೊತಾ ಇದಾರೆ. ಜನರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ,” ಎಂದು ಹೇಳಿದರು.
ಇನ್ನೊಂದೆಡೆ, ಬಿಜೆಪಿ ನಾಯಕರ GST ಉಳಿತಾಯ ಉತ್ಸವ ಸಂಭ್ರಮಾಚರಣೆ ಕರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಗಬ್ಬರ್ ಸಿಂಗ್ ದರೋಡೆಯ ಪ್ರಮಾಣವನ್ನು ಕಡಿಮೆ ಮಾಡಿದ್ದಾನೆ, ಇದಕ್ಕಾಗಿ ಎಲ್ಲರೂ ಉತ್ಸವ ಆಚರಿಸಬೇಕು. ಈ ಗಬ್ಬರ್ ಸಿಂಗ್ 8 ವರ್ಷ ಮಾಡಿದ ಪೂರ್ಣ ಪ್ರಮಾಣದ ಲೂಟಿಯನ್ನು ಎಲ್ಲರೂ ಮರೆತುಬಿಡಬೇಕು! ಕೇಂದ್ರ ಸರ್ಕಾರದ ವರಸೆ ಇದು! ಈ ದೇಶದ ಜನರನ್ನು ಹೇಗೆ ಬೇಕಾದರೂ ಮರಳು ಮಾಡಬಹುದಾದಷ್ಟು ಮೂರ್ಖರು ಎಂದು ಭ್ರಮಿಸಿದೆ ಬಿಜೆಪಿ. ಆದರೆ ಜನರು ಮೂರ್ಖರಲ್ಲ,” ಎಂದು ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.
“ಈಗ “GST ಉಳಿತಾಯ ಉತ್ಸವ“ ಮಾಡಬೇಕಂತೆ, ಕಳೆದ 8 ವರ್ಷದಿಂದ ”GST ಲೂಟಿ ಉತ್ಸವ” ಮಾಡುತ್ತಿದ್ದರಲ್ಲವೇ? ಜನರನ್ನು ಬಾವಿಗೆ ತಳ್ಳಿದ್ದು ಇವರೇ, ಈಗ ಬಾವಿಯಿಂದ ಮೇಲೇತ್ತಲು ಏಣಿ ಕೊಟ್ಟಿದ್ದೇವೆ ಎನ್ನುತ್ತಿರುವವರೂ ಇವರೇ. ಏಣಿ ಕೊಟ್ಟಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದೆ, 8 ವರ್ಷದಿಂದ ಜನರನ್ನು ಬಾವಿಗೆ ತಳ್ಳಿದ್ದರ ಪಾಪದ ಹೊಣೆಯೂ ಮೋದಿಯವರದ್ದೇ,” ಎಂದು ಟೀಕಿಸಿದ್ದಾರೆ
“ರಾಹುಲ್ ಗಾಂಧಿ ಅವರು ಗಬ್ಬರ್ ಸಿಂಗ್ ಟ್ಯಾಕ್ಸ್ ಕಡಿತಗೊಳಿಸಬೇಕು ಎಂದು ಈ ಹಿಂದೆಯೇ ಹಲವು ಬಾರಿ ಆಗ್ರಹಿಸಿದ್ದಾಗ ಅವರ ಮಾತುಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿಯವರಿಗೆ ಈಗ ಜನಾಕ್ರೋಶಕ್ಕೆ ಬೆದರಿ GST ಕಡಿತಗೊಳಿಸಿದ್ದರ ಕ್ರೆಡಿಟ್ ತೆಗೆದುಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ?,” ಎಂದು ಪ್ರಶ್ನಿಸಿದ್ದಾರೆ.
“ದುಬಾರಿ GST ಜಾರಿ ಮಾಡಿದಾಗಲೂ ಮಾಸ್ಟರ್ ಸ್ಟ್ರೋಕ್ ಅಂದರು, ಈಗ GST ಕಡಿತಗೊಳಿಸಿದ್ದನ್ನೂ ಮಾಸ್ಟರ್ ಸ್ಟ್ರೋಕ್ ಅನ್ನುತ್ತಿದ್ದಾರೆ!
ಆದರೆ ಈ ಎಂಟು ವರ್ಷಗಳಲ್ಲಿ ಜನತೆಗೆ, ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು ಭರಿಸುವವರು ಯಾರು?
ಈ 8 ವರ್ಷಗಳಲ್ಲಿ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು GST ಪರಿಣಾಮದಿಂದ ಮುಚ್ಚಿಹೋಗಿದ್ದಕ್ಕೆ ಜವಾಬ್ದಾರಿ ಯಾರು?
ಈ 8 ವರ್ಷಗಳಲ್ಲಿ ದೇಶದ ಆರ್ಥಿಕತೆಗೆ ಬಿದ್ದ ಹೊಡೆತಕ್ಕೆ ಹೊಣೆ ಯಾರು? ಆಗಿರುವ ಉದ್ಯೋಗ ನಷ್ಟಕ್ಕೆ ಜವಾಬ್ದಾರಿ ಯಾರು?
ಇದೆಲ್ಲವಕ್ಕೂ ಮೋದಿಯವರೇ ಹೊಣೆಯಲ್ಲವೇ,” ಎಂದು ಕರ್ನಾಟಕ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.