ಸಿದ್ದರಾಮಯ್ಯ ರಾಜ್ಯದ ಅತ್ಯಂತ ಲೀಸ್ಟ್ ಬೆಸ್ಟ್ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಂತ್ರಿಯಾಗಿ ದೇವರಾಸು ಅರಸು ದಾಖಲೆ ಮುರಿದ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಮನರೇಗಾ ಯೋಜನೆ ವಿರೋಧಿಸಿ ಕಾಂಗ್ರೆಸ್ ಸರ್ಕಾರ ಜಂಟಿ ಅಧಿವೇಶನ ಕರೆಯಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತಾನೇ ಇಟ್ಟುಕೊಂಡಿಲ್ಲ. ರಾಜ್ಯ ಸರ್ಕಾರದ ಜವಾಬ್ದಾರಿಯ ಬಗ್ಗೆ ಕೂಡ ಹೇಳಿದೆ. ಗ್ರಾಮ ಪಂಚಾಯತಿಗಳಿಗೆ ಪವರೇ ಇಲ್ಲ ಅಂತಾರೆ. ಗ್ರಾಮ ಪಂಚಾಯತಿಯ ಮೂಲಕವೇ ಕೆಲಸದ ಬಗ್ಗೆ ತೀರ್ಮಾನ ಮಾಡುತ್ತದೆ. ಇಲ್ಲಿ ಎಲ್ಲಾ ಅಧಿಕಾರನ್ನ ಕಾಂಗ್ರೆಸ್ ಕಿತ್ತುಕೊಳ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇವತ್ತು ರಾಜ್ಯವನ್ನು ಸರ್ವನಾಶ ಮಾಡೋಕೆ ಹೊರಟಿದ್ದೀರಿ. ನಾನು ಕೂಡ ರಾಜ್ಯದಲ್ಲಿ ಸಿಎಂ ಆಗಿ ಆಡಳಿತ ನಡೆಸಿದ್ದೇನೆ. ಕೇಂದ್ರ ಸರ್ಕಾರ ನರೇಗಾ ಹಣ ಕೊಡದೇ ಇದ್ದಾಗ ಕಾರ್ಮಿಕರಿಗೆ ನಾನೇ 800 ಕೋಟಿ ಕೊಟ್ಟಿದ್ದೆ. ಆ ನಂತರ ಆ ಹಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟು ಹಣ ಪಡೆದಿದ್ದೇನೆ. ಕೇಂದ್ರ ಸರ್ಕಾರದ ಜೊತೆ ಯಾವ ರೀತಿಯ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಅನ್ನೋದು ಕಾಂಗ್ರೆಸ್ಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
‘ಪೇಪರ್ ಟೈಗರ್ ಅಂದೋರಿಗೆ ಉತ್ತರ ಕೊಡ್ತೀನಿ’
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕುಮಾರಸ್ವಾಮಿ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು, ಪ್ರಹ್ಲಾದ್ ಜೋಷಿಗೆ ಸವಾಲು ಹಾಕಿದ್ದಾರೆ. 11 ಲಕ್ಷ ಕೋಟಿ ಅವ್ಯವಹಾರ ಆಗಿದೆ ಎಂದು ಜೋಷಿ ಹೇಳಿದ್ದಾರೆ ಎಂಬ ಆರೋಪ ಮಾಡಿದ್ರು. ಅದು ಹಣವಲ್ಲ, ಅಷ್ಟು ವರ್ಕ್ ಆಗಿದೆ ಎಂದು ಹೇಳಿದ್ದಾರೆ ಅಷ್ಟೇ ಎಂದು ಎಚ್ಡಿಕೆ ಸಮರ್ಥಿಸಿಕೊಂಡಿದ್ದಾರೆ.
ನಾವು ಓಡಿ ಹೋಗ್ತಿದ್ದೇವೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಾಕ್ಯುಮೆಂಟ್ ಇಟ್ಟುಕೊಂಡು ಮಾತಾಡ್ಬೇಕು, ಹೀಗಾಗಿ ಇಂದು ಮಾತಾಡ್ತಿದ್ದೇವೆ. ಡಿಸಿಎಂ, ನನ್ನ ಪೇಪರ್ ಟೈಗರ್ ಅಂತ ಹೇಳಿದ್ದಾರೆ. ಅವ್ರಿಗೆ ಕಾಲ ಬಂದಾಗ ಉತ್ತರ ಕೊಡ್ತೇನೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಬಹಿರಂಗ ಚರ್ಚೆಗೆ ರೆಡಿ
ನಿನ್ನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಅಶೋಕ್ ಲಯ್ಲೆಂಡ್ ಯುನಿಟ್ ಉದ್ಘಾಟನೆ ಮಾಡಿ ಬಂದೆ. ನೀವು ಎಷ್ಟು ಕಂಪನಿಗಳನ್ನು ರಾಜ್ಯಕ್ಕೆ ತಂದಿದ್ದೀರಿ? ನರೇಗಾದಲ್ಲಿ ಕರ್ನಾಟಕದಲ್ಲೇ ಏನೇನು ಲೂಟಿ ಆಗಿದೆ ಅಂತಾ ಟನ್ ಗಟ್ಟಲೆ ಮೆಟಿರಿಯಲ್ ಕೊಡುತ್ತೇನೆ. ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಬಿಟ್ಟು ಗೌರವಯುತವಾಗಿ ನಡೆದುಕೊಳ್ಳಿ ಎಂದು ಇದೇ ವೇಳೆ ಹೆಚ್ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಅಲ್ಲದೇ ಓಪನ್ ಡಿಬಿಟ್ಗೂ ನಾನು ರೆಡಿ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಚರ್ಚೆ ಸವಾಲಿಗೆ ಪ್ರತಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


