ದೆಹಲಿಯ ವಸಂತ್ ಕುಂಜ್ನಲ್ಲಿರುವ ಆಶ್ರಮದ ನಿರ್ದೇಶಕ, ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿಯ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಚೈತನ್ಯಾನಂದ ಸರಸ್ವತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿ ಅಧ್ಯಾಪಕರು/ನಿರ್ವಾಹಕರಾಗಿ ಕೆಲಸ ಮಾಡುವ ಮಹಿಳೆಯರು ಒತ್ತಡ ಹೇರಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಆರೋಪಿ ಚೈತನ್ಯಾನಂದ ಸರಸ್ವತಿಯನ್ನು ಆಶ್ರಮದ ಆಡಳಿತವು ಸ್ಥಾನದಿಂದ ತೆಗೆದುಹಾಕಿದೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ದೆಹಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ್ದು, ಆತ ಕೊನೆಯದಾಗಿ ಆಗ್ರಾದಲ್ಲಿದ್ದ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಪೊಲೀಸರೊಂದಿಗೆ ಹುಡುಕಾಟ ಮುಂದುವರಿದಿದೆ.
15ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ ಬಂಧನ ಭೀತಿಯಿಂದ ಪರಾರಿಯಾಗಿದ್ದಾನೆ. ಪೊಲೀಸರು ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಪಡೆಯುತ್ತಿರುವ 32 ಮಹಿಳಾ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 4 ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯು ಸಂಸ್ಥೆಯ ಸಂಚಾಲಕ ಆಗಿದ್ದ ಎಂಬುದು ಗೊತ್ತಾಗಿದೆ.
ಸ್ವಾಮೀಜಿ ಸ್ಕಾಲರ್ಶಿಪ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಸ್ವಾಮೀಜಿ ಕೆಟ್ಟ ಭಾಷೆ, ಅಶ್ಲೀಲ ಮೆಸೇಜ್ ಮಾಡುವ ಜೊತೆಗೆ ಅನಗತ್ಯ ದೈಹಿಕ ಸಂಪರ್ಕ ಹೊಂದಿದ್ದರು ಎಂದು 17 ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್ನೊಂದಿಗೆ ರಾಜತಾಂತ್ರಿಕ ವಾಹನ ಬಳಸುತ್ತಿದ್ದ ವಿಚಾರವೂ ಬಯಲಾಗಿದ್ದು, ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.