ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ಡೆಹ್ರಾಡೂನ್ನ ಒಂದೇ ಕುಟುಂಬದ ಏಳು ಮಂದಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಸುಳಿಗೆ ಸಿಲುಕಿ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವರದಿಯಲ್ಲಿ ತಿಳಿಸಿದ್ದಾರೆ.
ಪ್ರವೀಣ್ ಮಿತ್ತಲ್ (42) ಅವರ ಪತ್ನಿ, ಪೋಷಕರು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗ ಮೃತಪಟ್ಟವರು. ಪಂಚಕುಲದ ಸೆಕ್ಟರ್27ರಲ್ಲಿ ಸೋಮವಾರ ರಾತ್ರಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ 6 ಮಂದಿ ಅಸ್ವಸ್ಥರಾಗಿ ಪರದಾಡುತ್ತಿದ್ದರು. ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಹಾಗಾಗಿ ನನ್ನ ಕುಟುಂಬದವರೆಲ್ಲರೂ ವಿಷ ಸೇವಿಸಿದ್ದೇವೆ. ಇನ್ನು 5 ನಿಮಿಷದಲ್ಲಿ ನಾನೂ ಸಾಯುತ್ತೇನೆ ಎಂದು ಹೇಳಿದ್ದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಕಾರಿನಲ್ಲಿದ್ದ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಪರಲ್ಲಾಗಲೇ ಅವರೆಲ್ಲ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಪ್ರವೀಣ್ ಮಿತ್ತಲ್ ಕುಟುಂಬವು ಪಂಚಕುಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುವಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ.
ಕಾರಿನಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಸಾಲಭಾದೆಯಿಂದ ಕುಟುಂಬಸ್ಥರೆಲ್ಲರು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆಯಲಾಗಿದೆ. ಹೆಚ್ಚಿನ ತನಿಖೆಯನ್ನು ಕೈಗೊಂಡಿರುವುದಾಗಿ ಡಿಸಿಪಿ ಹಿಮಾದ್ರಿ ಕೌಶಿಕ್ ತಿಳಿಸಿದ್ದಾರೆ .ಘಟನಾ ಸ್ಥಳಕ್ಕೆ ಡಿಸಿಪಿ ಹಿಮಾದ್ರಿ ಕೌಶಿಕ್ ಹಾಗೂ ಪಂಚಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಚಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.