Menu

ಕುಂಭಮೇಳದ ನದಿ ನೀರು ಕುಡಿಯಲು ಯೋಗ್ಯ: ಯೋಗಿ ಆದಿತ್ಯನಾಥ್

ನವದೆಹಲಿ:ಪವಿತ್ರ ಮಹಾಕುಂಭ ಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ. ನೀರಿನಲ್ಲಿ ಮಿತಿ ಮೀರಿದ ಮಲ ಬ್ಯಾಕ್ಟೀರಿಯಾ ಪತ್ತೆ ಆಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯನ್ನು ಸಾರಸಗಾಟಿ ತಳ್ಳಿಹಾಕಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತ್ರಿವೇಣಿ ಸಂಗಮದ ನೀರು ಕೇವಲ ಸ್ನಾನಕ್ಕಷ್ಟೇ ಅಲ್ಲ. ಕುಡಿಯಲು ಕೂಡ ಯೋಗ್ಯವಾಗಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನವನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಯೋಗಿ ಆದಿತ್ಯನಾಥ್‌, ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ನ್ಯಾಯಾಧಿಕರಣಕ್ಕೆ ನೀಡಿರುವ ವರದಿಯ ವಿರುದ್ಧ ಕಿಡಿ ಕಾರಿದ್ದಾರೆ.

ಸನಾತನ ಧರ್ಮ, ಗಂಗಾ ಮಾತೆ ಹಾಗೂ ಮಹಾ ಕುಂಭದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಅಥವಾ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುವುದು ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಕೋಟ್ಯಂತರ ಜನರ ನಂಬಿಕೆಯೊಂದಿಗೆ ಆಟವಾಡಿದಂತೆ ಎಂದು ಹೇಳಿದ್ದಾರೆ.

ಸಂಗಮ ನೀರು ಸ್ನಾನಕ್ಕೆ ಮಾತ್ರವಲ್ಲ, ಕುಡಿಯಲು ಕೂಡ ಸೂಕ್ತವಾಗಿದೆ ಎಂದು ಸಮರ್ಥಿಸಿಕೊಂಡಿರುವ ಅವರು, ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಇದೆ ಎಂಬ ವರದಿಯ ಬಳಿಕ ಮಹಾಕುಂಭ ಮೇಳಕ್ಕೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ, ಅಪ್ರಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮಹಾಕುಂಭದ ಸಮಯದಲ್ಲಿ ಪ್ರಯಾಗ್ ರಾಜ್‌ನ ವಿವಿಧ ಸ್ಥಳಗಳು ಸ್ನಾನ ಮಾಡಲು ಪ್ರಾಥಮಿಕ ನೀರಿನ ಗುಣಮಟ್ಟಕ್ಕೆ ಅನುಗುಣವಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿಯನ್ನು ಸಲ್ಲಿಸಿತ್ತು. ಈ ವರದಿ ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಕೋಟ್ಯಂತರ ಜನರು ಪುಣ್ಯಸ್ನಾನ ಕೈಗೊಳ್ಳುತ್ತಿರುವ ತ್ರಿವೇಣಿ ಸಂಗಮದ ನೀರಿನ ಶುದ್ಧತೆಯ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಇದರ ಬೆನ್ನಲ್ಲೇ, ಯೋಗಿ ಆದಿತ್ಯನಾಥ್‌ ಅವರ ಹೇಳಿಕೆ ಹೊರಬಿದ್ದಿದೆ.

ಯೋಗಿ ಸಮರ್ಥನೆ:

ಮಹಾ ಕುಂಭ ಮೇಳವನ್ನು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ಸಂಸ್ಥೆ ಆಯೋಜಿಸುವುದಿಲ್ಲ. ಈ ಕಾರ್ಯಕ್ರಮವು ಸಮಾಜದದ್ದಾಗಿದೆ, ಸರ್ಕಾರವು ತನ್ನ ಜವಾಬ್ದಾರಿಗಳನ್ನು ಪೂರೈಸಲು ಸೇವಕನಂತೆ ಕಾರ್ಯನಿರ್ವಹಿಸುತ್ತಿದೆ. ಈ ಶತಮಾನದ ಮಹಾ ಕುಂಭದೊಂದಿಗೆ ಕೈಜೋಡಿಸುವ ಅವಕಾಶ ನಮ್ಮ ಸರ್ಕಾರಕ್ಕೆ ದೊರೆತಿರುವುದು ನಮ್ಮ ಅದೃಷ್ಟ.

ದೇಶ ಮತ್ತು ಜಗತ್ತು ಕುಂಭಮೇಳದಲ್ಲಿ ಭಾಗವಹಿಸಿವೆ ಮತ್ತು ಎಲ್ಲಾ ಸುಳ್ಳು ಅಭಿಯಾನಗಳನ್ನು ನಿರ್ಲಕ್ಷಿಸಿ ಅದನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ದಿವೆ. ಮಹಾಕುಂಭಕ್ಕೆ ಇನ್ನು ಏಳು ದಿನಗಳು ಉಳಿದಿವೆ ಮತ್ತು ಅಂಕಿ ಅಂಶಗಳ ಪ್ರಕಾರ, ಈ ವರೆಗೆ 56 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಸಹಾನುಭೂತಿ ಇದೆ:

ಜನವರಿ 29ರಂದು ಸಂಭವಿಸಿದ ಮಹಾ ಕುಂಭ ಕಾಲ್ತುಳಿತದ ಸಂತ್ರಸ್ತರಿಗೆ ಸಂತಾಪ ಸೂಚಿಸಿದ ಯೋಗಿ ಆದಿತ್ಯನಾಥ್, “ಕಾಲ್ತುಳಿತಕ್ಕೆ ಬಲಿಯಾದ ಎಲ್ಲರಿಗೂ ಮತ್ತು ಕುಂಭಕ್ಕೆ ಪ್ರಯಾಣಿಸುವಾಗ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಸಹಾನುಭೂತಿ ಇದೆ. ನಮ್ಮ ಸಂತಾಪಗಳು ಅವರ ಕುಟುಂಬ ಸದಸ್ಯರೊಂದಿಗೆ ಇವೆ, ಸರ್ಕಾರವು ಅವರೊಂದಿಗೆ ನಿಲ್ಲುತ್ತದೆ, ಸರ್ಕಾರವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *