ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಪ್ರಧಾನ ಅರ್ಚಕ ತಂತ್ರಿ ಕಂದರಾರು ರಾಜೀವ್ ಅವರನ್ನು ಎಸ್ ಐಟಿ ಪೊಲೀಸರು ಬಂಧಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ತಂತ್ರಿ ರಾಜೀವ್ ಅವರನ್ನು ಶುಕ್ರವಾರ ಮುಂಜಾನೆ ವಶಕ್ಕೆ ಪಡೆದು ಗೌಪ್ಯ ಜಾಗದಲ್ಲಿ ವಿಚಾರಣೆ ನಡೆಸಿದ ಎಸ್ ಐಟಿ ಪೊಲೀಸರು ಮಧ್ಯಾಹ್ನ ಕಚೇರಿಗೆ ಕರೆದುಕೊಂಡು ಬಂದು ಬಂಧಿಸಿದರು.
ಶನಿವಾರ ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರಪಡಿಸಿ ನ್ಯಾಯಾಂಗ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇದೀಗ ರಾಜೀವ್ ಅವರನ್ನು 15ನೇ ಆರೋಪಿಯಾಗಿ ಉಲ್ಲೇಖಿಸಲಾಗಿದೆ.
ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪಾಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ ಪದ್ಮಕುಮಾರ್ ನೀಡಿದ ಹೇಳಿಕೆಗಳನ್ನು ಆಧರಿಸಿ ಪ್ರಧಾನ ಅರ್ಚಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೀವ್ ಪಾಟಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಮತ್ತು ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ಬದಲಾಯಿಸಲು ಶಿಫಾರಸು ಮಾಡಿದ್ದಾರೆ ಎಂದು SIT ತನಿಖೆ ವೇಳೆ ತಿಳಿದುಬಂದಿದೆ.
ನಂತರ, ತಿರುವಾಂಕೂರು ದೇವಸ್ವಂ ಮಂಡಳಿಯು ಮರುಲೇಪನಕ್ಕೆ ಅನುಮತಿ ಕೋರಿದಾಗ ರಾಜೀವರು ಅನುಮೋದನೆಯನ್ನು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಖೆಯ ಭಾಗವಾಗಿ ಈ ಹಿಂದೆ ರಾಜೀವ್ ಅವರನ್ನು ವಿಚಾರಣೆ ನಡೆಸಲಾಗಿತ್ತು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನ ಕಳ್ಳತನ ಪ್ರಕರಣದ ತನಿಖೆಗಾಗಿ ಕೇರಳ ಹೈಕೋರ್ಟ್ ಎಸ್ಐಟಿ ರಚಿಸಿದ ನಂತರ ಪ್ರಕರಣದಲ್ಲಿ ಬಂಧಿತರಾದವರಲ್ಲಿ ರಾಜೀವ್ 15 ನೇ ವ್ಯಕ್ತಿಯಾಗಿದ್ದಾರೆ.


