ಮೈಸೂರು: ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರುಣಾ ತಾಲ್ಲೂಕಿನ ಹೋಟೆಲ್ ವೊಂದರ ಮುಂಭಾಗ ರವಿವಾರ ತಡರಾತ್ರಿ ನಡೆದಿದೆ.
ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್(32) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ರವಿವಾರ ತಡರಾತ್ರಿ 1.45 ಗಂಟೆ ಸಮಯದಲ್ಲಿ ವರುಣಾ ಬಳಿಯ ಹೋಟೆಲ್ ಮುಂಭಾಗ ಸ್ಕೂಟರ್ ಮತ್ತು ಕಾರಿನಲ್ಲಿ ಬಂದ ಆರು ಜನರ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ವೇಳೆ ಆರೋಪಿಯೊಬ್ಬ ಕೊಲೆ ಮಾಡಿದ ಬಳಿಕ ತನ್ನ ಮೊಬೈಲ್ ನಲ್ಲಿ ಫೋಟೊ ತೆಗೆದುಕೊಂಡು ವಿಕೃತಿ ಮೆರೆದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಳೆ ವೈಷಮ್ಯದಿಂದ ಈ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಕೊಲೆಯಾದ ರೌಡಿಶೀಟರ್ ಕಾರ್ತಿಕ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.