ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ.
ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಗಮೋಹನ್ ದಾಸ್ ಮಧ್ಯಂತರ ವರದಿಯನ್ನು ಸಲ್ಲಿಸಿ ಮಾತನಾಡಿದರು. ಎರಡು ತಿಂಗಳಿ ಗಿಂತ ಹೆಚ್ಚು ನಾನು ಹಾಗೂ ನನ್ನ ತಂಡ ಅಧ್ಯಯನ ಮಾಡಿ 104 ಪುಟಗಳ ಒಳಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ನೀಡಿದ್ದೇವೆ ಎಂದರು.
ವರದಿ ನೀಡಿರುವ ಹಂತದಲ್ಲಿ ಬೇರೆ ಯಾವ ವಿಚಾರ ಹೇಳಲಾಗದು, ಸರ್ಕಾರದ ತೀರ್ಮಾನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಧ್ಯಂತರ ವರದಿ ನೀಡಿರುವುದು ಒಳ ಮೀಸಲಾತಿ ಜಾರಿಯ ವಿಳಂಬ ಧೋರಣೆಗೆ ಅನುಕೂಲ ಎಂಬ ವಾದವನ್ನು ನಿರಾಕರಣೆ ಮಾಡಿದ ಅವರು, ನನಗೆ ಹೀಗೆ ಅನ್ನಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕೊಡಬೇಕು ಎಂಬುದು ನನ್ನ ಆಸೆಯಾಗಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಇದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಮಧ್ಯಂತರ ವರದಿಯಲ್ಲಿ ನೇಮಕಾತಿ ಬಗ್ಗೆ ಯಾವುದೇ ಸಲಹೆ ಕೊಟ್ಟಿಲ್ಲ. ವರದಿಯಲ್ಲಿ ಏನಿದೆ ಎಂಬುದನ್ನು ನೀವು ಸರ್ಕಾರದ ಬಳಿ ಕೇಳಬೇಕು ಎಂದು ಹೇಳಿದರು.
ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದು, ಕ್ಯಾಬಿನೆಟ್ ನಲ್ಲಿ ಈ ವಿಚಾರ ಚರ್ಚೆ ಆಗುವ ಸಾಧ್ಯತೆ ಇದೆ. ಒಳಮೀಸ ಲಾತಿಗಾಗಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾದು ನೋಡಬೇಕಿದೆ.