Menu

ಆರ್‌ಸಿಬಿ ವಿಜಯೋತ್ಸವ ದುರಂತ: ಹೈಕೋರ್ಟ್ ಜಡ್ಜ್ ತನಿಖೆ, 50 ಲಕ್ಷ ಪರಿಹಾರಕ್ಕೆ ವಿಜಯೇಂದ್ರ ಆಗ್ರಹ

ಆರ್‌ಸಿಬಿ  ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಕುರಿತು ಕಾರ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು,  ಮೃತರಿಗೆ ಕನಿಷ್ಠ 50 ಲಕ್ಷ ಪರಿಹಾರ ಕೊಡಬೇಕು ಎಂದು  ಶಾಸಕ ಬಿ.ವೈ. ವಿಜಯೇಂದ್ರ  ಆಗ್ರಹಿಸಿದ್ದಾರೆ.

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿ ಸಂಖ್ಯೆ 101ರಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು. ತೆಲಂಗಾಣದಲ್ಲಿ ಈಚೆಗೆ ಅಲ್ಲು ಅರ್ಜುನ್ ಅವರ ಸಿನಿಮಾ ಬಿಡುಗಡೆ ವೇಳೆ ತುಳಿತಕ್ಕೆ ಒಳಗಾಗಿ ಸಾವು ನೋವಾಗಿತ್ತು. ಅಲ್ಲಿ ಕೂಡ ಕಾಂಗ್ರೆಸ್ ಸರಕಾರ ಇತ್ತು. ಅಲ್ಲು ಅರ್ಜುನ್ ಅವರನ್ನು ಬಂಧಿಸಲಿಲ್ಲವೇ ಎಂದು ಕೇಳಿದರು.

ಈ ದುರ್ಘಟನೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಲಂಡನ್‍ನಲ್ಲೋ, ದುಬೈನಲ್ಲೋ ಇರುವ ಆರ್‍ಸಿಬಿ ಮಾಲೀಕರು ಕೂಡ ಇದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಕೇರಳದಲ್ಲಿ ಆನೆ ತುಳಿತದಿಂದ ಸಾವಾದರೆ ಆನೆ ಕರ್ನಾಟಕದ್ದು ಎಂದು 25 ಲಕ್ಷ ಪರಿಹಾರ ಘೋಷಿಸಿದ್ದರ ಬಗ್ಗೆ  ಗಮನ ಸೆಳೆದರು.

ಒಬ್ಬ ಮ್ಯಾಜಿಸ್ಟ್ರೇಟ್ ರಿಂದ ತನಿಖೆ ನಡೆದರೆ ಅಪರಾಧಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿಗಳು, ಮಂತ್ರಿಮಂಡಲದ ಸದಸ್ಯರನ್ನು ತನಿಖೆ ಮಾಡಲಾಗದು ಎಂದು ನುಡಿದರು. ಮುಖ್ಯಮಂತ್ರಿಗಳು ಒಬ್ಬ ಮ್ಯಾಜಿಸ್ಟ್ರೇಟ್ ರಿಂದ ತನಿಖೆಗೆ ಆದೇಶಿಸಿದ್ದಾರೆ. ಅದರ ಅರ್ಥ ಏನು ಎಂದು ಕೇಳಿದರು. ವೈಫಲ್ಯಕ್ಕೆ ಹೊಣೆ ಹೊರಲು ಸರಕಾರ ಸಿದ್ಧವಿಲ್ಲ. ಇವರಿಗೆ ಜನಪರ ಕಾಳಜಿ ಬದಲು ಪ್ರಚಾರದ ಹುಚ್ಚೇ ಪ್ರಮುಖವೆನಿಸಿದೆ ಎಂದು ಟೀಕಿಸಿದರು.

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ 13 ವರ್ಷದ ಬಾಲಕನೂ ಸೇರಿ 11 ಜನರು ಮೃತಪಟ್ಟಿದ್ದಾರೆ. ರಾಜ್ಯ ಸರಕಾರವು ಇಷ್ಟೊಂದು ಆತುರಾತುರವಾಗಿ ಈ ಸಂಭ್ರಮಾಚರಣೆಯನ್ನು ಯಾಕೆ ಆಯೋಜಿಸಿತ್ತು,  ಬೇರೆ ಯಾರಾದರೂ ಆಯೋಜಿಸಿದ್ದರೆ ಸರಕಾರ ಅನುಮತಿ ಕೊಟ್ಟದ್ದೇಕೆ,  ಪೂರ್ವತಯಾರಿ ಇಲ್ಲದೇ ನಿನ್ನೆಯೇ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಕೇಳಿದರು.

ಸಾವಿನ ಸಂಖ್ಯೆ ಐದಾರರ ಕುರಿತ ಮಾಹಿತಿ ಟಿ.ವಿಗಳಲ್ಲಿ ಬರುತ್ತಿದ್ದರೂ ಉಪ ಮುಖ್ಯಮಂತ್ರಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್ ಮುತ್ತಿಕ್ಕಿದ್ದರು. ವಿಧಾನಸೌಧ ದಲ್ಲಿ ಆಡಳಿತ ಪಕ್ಷದವರ ಸೆಲ್ಫಿಗಳ ಭರಾಟೆ ಮುಂದುವರೆದಿತ್ತು. ರಾಜ್ಯ ಸರಕಾರದ ಇಷ್ಟೊಂದು ಅಮಾನವೀಯ ನಡವಳಿಕೆ ಖಂಡನಾರ್ಹ ಎಂದು ಬಿ.ವೈ. ವಿಜಯೇಂದ್ರ  ಟೀಕಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ವಿಧಾನಸೌಧದ ಮುಂದೆ ಸಂಭ್ರಮಾಚರಣೆ ಮಾಡುವ ಅಗತ್ಯ ಏನಿತ್ತು,  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾ ಚರಣೆ ಇರುವಾಗ ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲು ಡಿಸಿಎಂ ತೀರ್ಮಾನಿಸಿದರೇ,  ಮುಖ್ಯಮಂತ್ರಿ ತಿಳಿಸಿದರೇ,  ಯಾವಾಗ ಇದು ತೀರ್ಮಾನ ಆಗಿದೆ ಎಂದು ಸ್ಪಷ್ಟಪಡಿಸಲು ಆಗ್ರಹಿಸಿದರು.

ದುರ್ಘಟನೆಯ ಬಳಿಕ ಆರ್‍ಸಿಬಿ ಟೀಂ ವಿಧಾನಸೌಧಕ್ಕೆ ಹೊರಡುವ ಮುಂಚಿತವಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಆರಂಭವಾಗಿತ್ತು. ಒಬ್ಬಿಬ್ಬರು ಸತ್ತ ಮಾಹಿತಿ ಇದ್ದರೂ ವಿಧಾನಸೌಧದ ಮುಂದೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಸಂಭ್ರಮಾಚರಣೆ ಮಾಡುವ ಅವಶ್ಯಕತೆ ಏನಿತ್ತು,  ಯಾಕೆ ಅದನ್ನು ಬದಲಿಸಲಿಲ್ಲ,  ಸಾವಿನ ಮಾಹಿತಿ ಇದ್ದರೂ ವಿಧಾನಸೌಧದ ಮುಂದೆ ಸಂಭ್ರಮಾಚರಣೆ ಮುಂದುವರೆಸಿದ್ದೇಕೆ ಎಂದು ಕೇಳಿದರು.

30-40 ಸಾವಿರ ಜನರನ್ನು ನಿರೀಕ್ಷಿಸಿದ್ದೆವು. ಒಂದೂವರೆಯಿಂದ 2 ಲಕ್ಷ ಜನ ಬಂದರು ಎಂದು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹೇಳಿದ್ದು, ಇದು ವೈಫಲ್ಯದ ಸ್ಪಷ್ಟ ಉದಾಹರಣೆ ಎಂದು ವಿಶ್ಲೇಷಿಸಿದರು. ಸಂಖ್ಯೆಯ ಕುರಿತು ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಸ್ಪಷ್ಟತೆ ಇರಲಿಲ್ಲ.

ಆಂಬುಲೆನ್ಸ್, ಮಹಿಳಾ ಪೊಲೀಸರು, ಸ್ಟ್ರೆಚರ್‍ಗಳು, ಸಮರ್ಪಕ ಪೊಲೀಸ್ ವ್ಯವಸ್ಥೆ ಇರಲಿಲ್ಲ ಎಂದ ಅವರು, ವಿಧಾನಸೌಧದ ಬಳಿ ದುರ್ಘಟನೆ ಆಗಿಲ್ಲ; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮಾತ್ರ ದುರ್ಘಟನೆ ಆಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದು ನುಣುಚಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಸರಕಾರದ ಬೇಜವಾಬ್ದಾರಿಯಿಂದ 11 ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಇದರ ಸಮರ್ಪಕ ತನಿಖೆ ಆಗಲೇಬೇಕಿದೆ. ರಾಜ್ಯ ಸರಕಾರ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಸಿಟ್ಟಿಂಗ್ ಹೈಕೋರ್ಟ್ ಜಡ್ಜ್‍ರಿಂದ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ರಾಜ್ಯ ಸರಕಾರ ಸಮರ್ಪಕ ನಿರ್ಧಾರ ಮಾಡಲಿ ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, 11 ಜನರ ಸಾವು ದುಃಖಕರ ಸಂಗತಿ ಎಂದು ಸಂತಾಪ ಸೂಚಿಸಿದರು. ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಕಪ್ ನಮ್ದೇ, ಆದರೆ ಸಾವಿನ ತಪ್ಪು ಯಾರದೆಂದು ರಾಜ್ಯದ 7 ಕೋಟಿ ಜನರು ಕೇಳುತ್ತಿದ್ದಾರೆ ಎಂದು ಹೇಳಿದರು. ಇಡೀ ಸರಕಾರವೇ ಫೋಟೊ ಶೂಟಿಂಗ್‍ನಲ್ಲಿ ಬ್ಯುಸಿ ಆಗಿತ್ತು ಎಂದು ಟೀಕಿಸಿದರು. ಇಲ್ಲಿ 11 ಜನರು ಸತ್ತದ್ದಕ್ಕೆ ಯಾರ ಮೇಲೆ ಎಫ್‍ಐಆರ್ ಹಾಕಿದ್ದೀರಿ ಎಂದು ಕೇಳಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪೊಲೀಸರು, ಸರಕಾರ ಕಾರಣ ಅಲ್ಲವಾದರೆ ಇನ್ಯಾರು ಕಾರಣ ಎಂದು ಪ್ರಶ್ನಿಸಿದರು. ಇದಕ್ಕೆ ವಿಜಯೇಂದ್ರ, ಅಶೋಕ್, ವಿಜಯೇಂದ್ರ ಅವರೇ ಕಾರಣ ಎಂದು ಹೇಳಲು ನಿಮಗೆ ಯಾರೂ ಹೇಳಿ ಕೊಟ್ಟಿಲ್ಲವೇ ಎಂದು ಕೇಳಿದರು.

 

Related Posts

Leave a Reply

Your email address will not be published. Required fields are marked *