ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು 56 ಮಂದಿ ಗಾಯಗೊಂಡ ದುರಂತ ಘಟನೆಯ ತನಿಖೆನ್ನು ಸಿಐಡಿ ಮತ್ತು ಎಸ್ ಐಟಿಗೆ ವಹಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.
ರಾಜ್ಯ ಸರ್ಕಾರದ ವರದಿ ಸಲ್ಲಿಸಿದ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿಚಾರಣೆ ವೇಳೆ ಪ್ರಸ್ತುತ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, 15 ದಿನಗಳಲ್ಲಿ ವರದಿ ಕೈ ಸೇರಲಿದೆ ಎಂದರು.
ಪರಿಸ್ಥಿತಿಯ ಗಂಭೀರತೆ ಅರಿತು ಪ್ರಕರಣವನ್ನು ಸಿಐಡಿ ಮತ್ತು ಎಸ್ ಐಟಿಗೆ ತನಿಖೆ ವರ್ಗಾಯಿಸಲಾಗುವುದು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಎಫ್ ಐಆರ್ ದಾಖಲಾಗಿದೆ ಎಂದರು.
ಕಾಲ್ತುಳಿತ ಪ್ರಕರಣದಲ್ಲಿ ಯಾರೂ ಆರೋಪ-ಪ್ರತ್ಯಾರೋಪ ಮಾಡಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ ನ್ಯಾಯಮೂರ್ತಿಗಳು, ಕಾಲ್ತುಳಿತ ದುರಂತಕ್ಕೆ ಕಾರಣ ಏನು ಎಂದು ಸಮಗ್ರ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 36 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಎರಡೂವರೆ ಲಕ್ಷ ಜನರು ಸೇರಿದ್ದು ದುರಂತಕ್ಕೆ ಕಾರಣ ಎಂದು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯ ಉಸ್ತುವಾರಿಯನ್ನು ಕೆಎಸ್ ಸಿಎ ಮತ್ತು ರಾಯಲ್ ಚಾಲೆಂಜರ್ಸ್ ಆಯೋಜಿಸಿದ್ದು, ಆರ್ ಸಿಬಿ ಟಿಕೆಟ್ ಹಂಚಿಕೆ ಮಾಡಲು ನಿರ್ಧರಿಸಿತ್ತು. ಅಲ್ಲದೇ 36 ಸಾವಿರ ಟಿಕೆಟ್ ವ್ಯವಸ್ಥೆ ಮಾಡಿತ್ತು ಎಂದು ಹೇಳಿದರು.
ಸಂಭ್ರಮಾಚರಣೆ ಕೆಎಸ್ ಸಿಎ ವಹಿಸಿಕೊಂಡಿದ್ದು, ರಾಜ್ಯ ಸರ್ಕಾರ 1600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕೆಎಸ್ ಆರ್ ಪಿ ತುಕಡಿ, ಕುಡಿಯುವ ನೀರು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು ಎಂದು ವಿವರಿಸಿದರು. ಈ ವೇಳೆ ಮಾರ್ಗಸೂಚಿ ಅನುಸರಿಸಲಾಗಿತ್ತೇ? ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಪ್ರಕರಣದ ತನಿಖೆ ನಡೆಸಲು ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಯಿತು.