ತವಾದಲ್ಲಿ ಫ್ರೈ ಮಾಡಿಟ್ಟಿದ್ದ ಮೀನನ್ನು ಇಲಿಗಳು ತಿಂದು ಮುಗಿಸಿದ್ದು, ಸ್ನೇಹಿತನೇ ತಿಂದಿದ್ದಾನೆಂದು ಭಾವಿಸಿ ಸಿಟ್ಟಿಗೆದ್ದ ಸ್ನೇಹಿತರಿಬ್ಬರು ಆತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಮುಂಬೈನ ಗೋರೆಗಾಂವ್ ನಲ್ಲಿ ನಡೆದಿದೆ.
ಕೊಲೆಯಾದವನನ್ನು ಅಫ್ಸರ್ ಎಂದು ಗುರುತಿಸಲಾಗಿದೆ, ಆತನ ಸ್ನೇಹಿತರಾದ ಸುರೇಶ್ ಮತ್ತು ರಾಜೇಶ್ ರಮೇಶ್ನಾಥ್ ಕೊಲೆ ಆರೋಪಿಗಳು. ಇವರಿಬ್ಬರು ಮನೆಯಲ್ಲಿ ಮೀನು ಅಡುಗೆ ಮಾಡುತ್ತಿದ್ದಾಗ ಮದ್ಯ ಸೇವಿಸಿ ಸ್ವಲ್ಪ ಹೊತ್ತಿನ ನಂತರ ಮೂವರೂ ನಿದ್ರೆಗೆ ಜಾರಿದ್ದಾರೆ. ಈ ಸಮಯದಲ್ಲಿ ಇಲಿಗಳು ಬೇಯಿಸಿದ ಮೀನನ್ನು ತಿಂದು ಖಾಲಿ ಮಾಡಿದ್ದವು.
ಸುರೇಶ್ ಮತ್ತು ರಾಜೇಶ್ ಊಟ ಮಾಡಲು ಎದ್ದಾಗ ಪಾತ್ರೆಯಲ್ಲಿ ಮೀನಿರಲಿಲ್ಲ, ಅಫ್ಸರ್ ತಿಂದಿದ್ದಾನೆ ಎಂದು ಅನುಮಾನಿಸಿ ಆತನನ್ನು ಎಬ್ಬಿಸಿದ್ದರು, ಮೂವರು ಜಗಳವಾಡಿ ಕೋಪದ ಭರದಲ್ಲಿ ಇಬ್ಬರು ಅಫ್ಸರ್ನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ.
ಕೃತ್ಯ ಎಸಗಿದ ಇಬ್ಬರೂ ಆರೋಪಿಗಳು ಹರಿಯಾಣಕ್ಕೆ ಪರಾರಿಯಾಗಿದ್ದಾರೆ. ವನ್ರೈ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈ ಮೂವರು ಸ್ನೇಹಿತರು ಸ್ಕ್ರ್ಯಾಪ್ ವ್ಯಾಪಾರಿಗಳಾಗಿದ್ದರು. ಸುರೇಶ್ ಹರಿಯಾಣದ ಕೈತಾಲ್ ನಿವಾಸಿ, ರಾಜೇಶ್ ನೇಪಾಳದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ಬಳಿಯೂ ಮೊಬೈಲ್ ಫೋನ್, ಗುರುತಿನ ದಾಖಲೆಗಳು ಇಲ್ಲದ ಕಾರಣ ತನಿಖೆ ಸವಾಲಾಗಿತ್ತು.
ಆ ಪ್ರದೇಶದಲ್ಲಿ 50ಮಂದಿ ಕಸ ತೆಗೆಯುವವರನ್ನು ವಿಚಾರಣೆ ನಡೆಸಿದ ನಂತರ, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸುರೇಶ್ ಹರಿಯಾಣದಲ್ಲಿ ಪತ್ತೆಯಾದರೆ, ಪೊಲೀಸರು ರಾಜೇಶ್ನನ್ನು ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.


