Menu

ಮಚ್ಚಿಡಿದು ರೀಲ್ಸ್ ಮಾಡಿದ್ದ ರಜತ್ ವಿನಯ್ ಗೆ ಜಾಮೀನು

rajat- vinay

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಬಳಸಿದ ಬಂಧಿತರಾಗಿರುವ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಗಳಾದ ರಜತ್‌, ವಿನಯ್‌ ಗೌಡ ಅವರಿಗೆ ಜಾಮೀನು ನೀಡಿ ನಗರದ ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ.

ಬಿಗ್‌ಬಾಸ್‌ 11 ನೇ ಸೀಸನ್‌ನ ಸ್ಪರ್ಧಿಗಳಾಗಿದ್ದ ರಜತ್‌ ಹಾಗೂ ವಿನಯ್‌ ಗೌಡ ರೀಲ್ಸ್‌ ವಿಡಿಯೋದಲ್ಲಿ ಮಚ್ಚು ಬಳಸಿದ ಕಾರಣಕ್ಕೆ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಸ್ವತಃ ಪ್ರೇರಿತ ಪ್ರಕರಣ ದಾಖಲಾಗಿತ್ತು.

ಕಳೆದ ಸೋಮವಾರ ಸಂಜೆ ಅವರನ್ನು ವಶಕ್ಕೆ ಪಡೆದು ಮಂಗಳವಾರ ಸಂಜೆ ಬಂಧನ ಮಾಡಿ ಬುಧವಾರ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ವಿಚಾರಣೆಗೆಂದು ಕೋರ್ಟ್‌ 3 ದಿನ ಪೊಲೀಸ್‌ ಕಸ್ಟಡಿಗೆ ನೀಡಿತ್ತು.

ಪೊಲೀಸ್‌ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಜಾಮೀನು ನೀಡಿ ಆದೇಶ ಹೊರಡಿಸಿದೆ.

ವಿಡಿಯೋದಲ್ಲಿ ಬಳಕೆ ಮಾಡಿದ್ದ ಅಸಲಿ ಮಚ್ಚಿನ ಕುರಿತು ಕಿರುತೆರೆ ನಟರಾದ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಗುರುವಾರ ತೀವ್ರ ವಿಚಾರಣೆ ನಡೆಸಿದರು. ಕಸ್ಟಡಿಯಲ್ಲಿರುವ ಇಬ್ಬರೂ ಆರೋಪಿ ನಟರು ಮಚ್ಚಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ, ಹೆಚ್ಚಿನ ವಿಚಾರಣೆ ಮುಂದುವರಿಸಲಾಗುವುದು. ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿದ್ದ ಉದ್ದೇಶ ಏನು? ಇನ್‌ಸ್ಟಾಗ್ರಾಂನ ‘ಬುಜ್ಜಿ’ ಖಾತೆಯಲ್ಲಿ ರೀಲ್ಸ್‌ ಅಪ್ಲೋಡ್‌ ಮಾಡಿ, ಬಳಿಕ ಡಿಲಿಟ್‌ ಮಾಡಿದ್ದು ಏಕೆ ಎಂದು ಪ್ರಶ್ನೆ ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.

ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿದ ಕಾರಣಕ್ಕೆ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸ್‌ ವಿಚಾರಣೆ ವೇಳೆ ನಟರು ನಕಲಿ ಮಚ್ಚು ತಂದು ಕೊಟ್ಟು ಠಾಣಾ ಜಾಮೀನು ಪಡೆದಿದ್ದರು. ಹೆಚ್ಚಿನ ತನಿಖೆಯಲ್ಲಿ ನಟರು ಕೊಟ್ಟಿದ್ದ ಮಚ್ಚು ನಕಲಿ ಎಂಬುದು ಗೊತ್ತಾಗಿದ್ದ ಹಿನ್ನೆಲೆಯಲ್ಲಿಪುನಃ ಬಂಧಿಸಿ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *