“ನನಗೆ ತಿಳಿದಿರುವಂತೆ ಸಚಿವ ಸಂಪುಟದಿಂದ ರಾಜಣ್ಣ ಅವರ ವಜಾ ಪಕ್ಷದ ತೀರ್ಮಾನ. ಇದರ ಹೊರತಾಗಿ ಬೇರೆ ವಿಚಾರ ನನಗೆ ತಿಳಿದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರ ಬಳಿ ಕೇಳಿದೆ. ಅವರು ತಮಗೆ ಬಂದ ಮಾಹಿತಿ ನೀಡಿದ್ದಾರೆ. ನನಗೆ ಬೇರೆ ಯಾವುದೇ ವಿಚಾರ ಗೊತ್ತಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಉತ್ತರಿಸಿದರು.
ಹೈಕಮಾಂಡ್ ಸೂಚನೆ ಮೇರೆಗೆ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಲಾಯಿತೇ ಎಂದು ಕೇಳಿದಾಗ,”ಇದರಿಂದ ನನಗೂ ನೋವಾಗಿದೆ. ರಾಜಣ್ಣ ಅವರು ನನ್ನ ಒಳ್ಳೆಯ ಸ್ನೇಹಿತರು, ಆಪ್ತರು. ಕಳೆದ 25 ವರ್ಷಗಳಿಂದ ಜೊತೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ” ಎಂದು ಹೇಳಿದರು.
ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೈಕಮಾಂಡ್ ನಿಂದ ಸೂಚನೆ ಏನಾದರೂ ಬಂದಿತ್ತೇ ಎಂದು ಕೇಳಿದಾಗ, “ಶಾಸಕರು ಮತ್ತು ಮಂತ್ರಿಗಳು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ಶಾಸಕರಾದ ನಂತರ ಪಕ್ಷಕ್ಕೆ ಸಂಬಂಧ ಪಟ್ಟಂತೆ ಅಶಿಸ್ತು ತೋರಿದರೆ ಸಣ್ಣಪುಟ್ಟ ನೋಟಿಸ್ ನೀಡುವ ಕೆಲಸ ಮಾಡಲಾಗುತ್ತದೆ. ಇದರ ಹೊರತಾಗಿ ಸಿಎಲ್ ಪಿ ನಾಯಕರೇ ಮಂತ್ರಿಗಳು ಹಾಗೂ ಶಾಸಕರ ಮೇಲೆ ನಿಯಂತ್ರಣ ಹೊಂದಿರುತ್ತಾರೆ” ಎಂದರು.
ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾ ಮಾಡಲಾಯಿತು ಎಂದಾಗ, “ಇದರ ಬಗ್ಗೆ ನನಗೆ ಗೊತ್ತಿಲ್ಲ. ಏನೂ ಮಾಡಲು ಆಗುವುದಿಲ್ಲ. ಇದು ಪಕ್ಷದ ತೀರ್ಮಾನ” ಎಂದರು. ರಾಜೀನಾಮೆ ತೆಗೆದುಕೊಳ್ಳಬಹುದಿತ್ತು, ಆದರೆ ವಜಾ ಮಾಡಿದ್ದು ಅವಮಾನ ಮಾಡಿದಂತೆ ಅಲ್ಲವೇ ಎಂದಾಗ, “ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಪುನರುಚ್ಚರಿಸಿದರು.