Menu

ರಾಜ್ಯದ ಕರಾವಳಿ, ಮಲೆನಾಡುಗಳನ್ನು ಹೈರಾಣಾಗಿಸಿದ ಮಳೆ

ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯ ನಲುಗಿಹೋಗಿದೆ. ಕರಾವಳಿಯಲ್ಲಿ  ಸುರಿಯುತ್ತಿರುವ ಗಾಳಿ ಸಹಿತ ಭಾರಿ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ಪುತ್ತೂರು ತಾಲೂಕಿನ ಕಡಬದಲ್ಲಿ ಬೃಹತ್ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ 6 ಮಂದಿ ಅದೃಷ್ಟವಷಾತ್‌ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಶಿವಮೊಗ್ಗ ಮೂಲದವರಾಗಿದ್ದು, ಕುಕ್ಕೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಅನಾಹುತ ನಡೆದಿದೆ. ಪುತ್ತೂರು ನಗರಸಭೆ ಕಾಂಪೌಂಡ್ ಕುಸಿದು 3 ಆಟೋಗಳು ಜಖಂಗೊಂಡಿವೆ. ಪ್ರಾಣಾಪಾಯ ಸಂಭವಿಸಿಲ್ಲ. ಮಹಾಲಿಂಗೇಶ್ವರ ದೇಗುಲ ಬಳಿ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ.

ಮಂಗಳೂರಿನ ಪ್ರಮುಖ ಪ್ರದೇಶಗಳು ಜಲಾವೃತವಾಗಿವೆ. ಪಂಪ್‌ವೆಲ್ ಸರ್ಕಲ್ ನದಿಯಂತಾಗಿದೆ. ಕೆಲವೆಡೆ ಹೋಟೆಲ್ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಅಡ್ಯಾರ್‌ನಲ್ಲಿ ಚರಂಡಿ ನೀರು ಬಾವಿ, ಗದ್ದೆಗಳಿಗೆ ಸೇರುತ್ತಿದೆ. ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಜೀವನದಿ ನೇತ್ರಾವತಿ ತುಂಬಿ ಹರಿಯುತ್ತಿದ್ದು, ಬೆಳ್ತಂಗಡಿಯಲ್ಲಿ ಅಡಕೆ ತೋಟದಲ್ಲಿ ನದಿ‌ ನೀರು ತುಂಬಿದೆ. ಕುಲಶೇಖರ ಬಳಿ‌ ಕಾರೊಂದು ಹೊತ್ತಿ ಉರಿದಿದೆ, ಚಾಲಕ ಪಾರಾಗಿದ್ದಾನೆ.

ಉಡುಪಿಯ ಮಲ್ಪೆ ಬೀಚ್​​ನಲ್ಲಿ ಬೃಹತ್‌ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಾರವಾರ ತಾಲೂಕಿನ ಸುಂಕೇರಿಯಲ್ಲಿ ಯುವಕನೊಬ್ಬ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದಾನೆ. ಕುಮಟಾ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡಕುಸಿತವಾಗಿದೆ. ನಿರಂತರ ಮಳೆಗೆ ಬಂಡೆಗಲ್ಲು ರಸ್ತೆಗೆ ಜಾರಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ.

ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ತೊಡಕಾಗಿದೆ. ಆನೆಮಹಲ್ ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು ರಸ್ತೆ ಮಣ್ಣಿನಿಂದ ಆವೃತವಾಗಿದೆ. ಇದೇ ಮಾರ್ಗದ ಅಡ್ಡನಗುಡ್ಡ, ದೊಡ್ಡತಪ್ಲು ಬಳಿ ಕೂಡ ಅತಿಯಾದ ಮಳೆಯಿಂದ ಬರೆ ಕುಸಿದು ರಸ್ತೆ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ.  ಬೇಲೂರು ಕುಪ್ಪಗೋಡು ಕೆರೆಗೋಡಿ ಬಿದ್ದು ಹತ್ತಾರು ಎಕರೆ ಪ್ರದೇಶದ ಭತ್ತದ ಗದ್ದೆಗಳು ಜಲಾವೃತವಾಗಿವೆ. ನದಿ ತೊರೆಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಯಗಚಿ ಜಲಾಶಯ ಭರ್ತಿಯಾಗಿದ್ದು , ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಯ ಬಿಡಲಾಗಿದೆ.

ಕೊಡಗಿನ ವಿರಾಜಪೇಟೆಯಲ್ಲಿ ಮಳೆ ನೀರು ರಸ್ತೆ ಮೇಲೆ ನದಿಯಂತೆ ಹರಿದು ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆಯಲ್ಲಿ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ. ಕೊಡಗು ವಿವಿ ಅಧೀನ‌ ಕಾಲೇಜುಗಳಿಗೆ, ಅಂಗನವಾಡಿಗಳಿಗೆ ರಜೆ ಘೋಷಣೆಯಾಗಿದೆ.

ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ ಸೇರಿದಂತೆ ಜಿಲ್ಲೆಯಾ ದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಎನ್​ಆರ್ ಪುರ ತಾಲೂಕಿನಲ್ಲಿ ಭದ್ರಾ ಹಿನ್ನೀರಿನಲ್ಲಿ ತಾಯಿಯ ಕಣ್ಣೆರುರೇ ಕಾಲು ಜಾರಿಬಿದ್ದು ಯುವಕ ಗೌತಮ್ ಎಂಬಾತ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ರಾಮಣ್ಣನಗಂಡಿ ಬಳಿ ಹೆದ್ದಾರಿಯಿಂದ ಮೂರು ಕಾರುಗಳು ನದಿಗೆ ಉರುಳಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ‌73 ರ ಚಕಮಕ್ಕಿ‌ ಗ್ರಾಮದಲ್ಲೂ ಕಾರು ಹೇಮಾವತಿ ‌ನದಿಗೆ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಚೇಗ್ ಗ್ರಾಮದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ವಿದ್ಯುತ್ ಕಂಬ ಪುಡಿಯಾಗಿದೆ. ಸಬ್ಲಿ‌ ಗ್ರಾಮದಲ್ಲಿ ಮಳೆ, ಗಾಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ.

Related Posts

Leave a Reply

Your email address will not be published. Required fields are marked *