ಮೊಹಾಲಿ: ಸ್ಪಿನ್ನರ್ ಗಳ ಮಾರಕ ದಾಳಿ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಕಟ್ಟಿಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 158 ರನ್ ಗಳ ಸಾಧಾರಣ ಗುರಿ ಪಡೆದಿದೆ.
ಮೊಹಾಲಿಯಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ ತಂಡ 2ಒ ಓವರ್ ಗಳಲ್ಲಿ 6 ವಿಕೆಟ್ ಗೆ 157 ರನ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕಟ್ಟಿ ಹಾಕಿದೆ.
ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಆರ್ ಸಿಬಿಗೆ ಈ ಪಂದ್ಯ ಸೇಡು ತೀರಿಸಿಕೊಳ್ಳುವ ಪಂದ್ಯವಾಗಿದೆ. ಅಲ್ಲದೇ ಪ್ಲೇಆಫ್ ಪ್ರವೇಶಿಸಲು ಗೆಲುವಿನ ಹಾದಿಗೆ ಮರಳಬೇಕಾದ ಅಗತ್ಯ ಕೂಡ ಆರ್ ಸಿಬಿಗೆ ಇದೆ.
ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭು ಸಿಮ್ರಾನ್ ಸಿಂಗ್ ಮೊದಲ ವಿಕೆಟ್ ಗೆ 4 ಓವರ್ ಗಳಲ್ಲಿ 42 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಸ್ಪಿನ್ನರ್ ಕೃನಾಲ್ ಪಾಂಡ್ಯ ಅಖಾಡಕ್ಕೆ ಇಳಿಯುತ್ತಿದ್ಧಂತೆ ನಾಟಕೀಯ ಕುಸಿತಕ್ಕೆ ಒಳಗಾಯಿತು.
ಪ್ರಿಯಾಂಶ್ ಆರ್ಯ (22 ರನ್, 15 ಎಸೆತ, 3 ಬೌಂಡರಿ, 1 ಸಿಕ್ಸರ್) ಪ್ರಭು ಸಿಮ್ರಾನ್ ಸಿಂಗ್ (33 ರನ್, 17 ಎಸೆತ, 5 ಬೌಂಡರಿ, 1 ಸಿಕ್ಸರ್) ಇಬ್ಬರೂ ಕೃನಾಲ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ (6) ಮೊದಲ ಬಾರಿ ಅಖಾಡಕ್ಕೆ ಇಳಿದ ರೊಮಾರಿಯೊ ರುದಫೋರ್ಡ್ ಗೆ ಬಲಿಯಾಗಿ ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ಪಂಜಾಬ್ 76 ರನ್ ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಜೋಸ್ ಇಂಗ್ಲೀಸ್ 29 ರನ್ ಬಾರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಸುಯೇಶ್ ಶರ್ಮ ಎಸೆತದಲ್ಲಿ ಬೌಲ್ಡ್ ಆದರು. ನೆಹಲ್ ರನೌಟ್ ಆದರು. ಆಗ ತಂಡದ ಮೊತ್ತ 114 ರನ್ ಗೆ 6 ವಿಕೆಟ್ ಆಗಿತ್ತು.
ಶಶಾಂಕ್ ಸಿಂಗ್ 33 ಎಸೆತಗಳಲ್ಲಿ 1 ಬೌಂಡರಿ ಸೇರಿದ 31 ರನ್ ಗಳಿಸಿದರೆ, ಮಾರ್ಕೊ ಜೆನ್ಸನ್ 20 ಎಸೆತಗಳಲ್ಲಿ 2 ಸಿಕ್ಸರ್ ಸೇರಿದಂತೆ 25 ರನ್ ಗಳಿಸಿದರು. ಅಲ್ಲದೇ ಮುರಿಯದ 7ನೇ ವಿಕೆಟ್ ಗೆ 43 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಸುಯೇಶ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ರೊಮಾರಿಯೊ ಶೆಫರ್ಡ್ 1 ವಿಕೆಟ್ ಗಳಿಸಿದರು. ಭುವನೇಶ್ವರ್ ಕುಮಾರ್ ಮತ್ತು ಹಾಜ್ಲೆವುಡ್ ವಿಕೆಟ್ ಪಡೆಯದೇ ಇದ್ದರೂ ಮಿತವ್ಯಯಿಗಳಾಗಿ ಗಮನ ಸೆಳೆದರು.