ನಿಗದಿಗೊಳಿಸಿದ್ದ ಕಕ್ಷೆ ಸೇರಲು ವಿಫಲವಾಗಿ ಪಥ ಬದಲಿಸಿದ್ದ ಭಾರತೀಯ ಬಾಹ್ಯಕಾಶ ಸಂಸ್ಥೆಯ ಪಿಎಸ್ ಎಲ್ ವಿ ಸಿ 62 ನೌಕೆ ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪತನಗೊಂಡಿದ್ದು, ಸ್ಪೇನ್ ನ ಉಪಗ್ರಹ ಹೊರತುಪಡಿಸಿ ಉಳಿದ ಎಲ್ಲಾ 15 ಉಪಗ್ರಹಗಳು ಹೊತ್ತಿ ಉರಿದು ಹೋಗಿವೆ.
ಸೋಮವಾರ ಬೆಳಗ್ಗೆ ಇಸ್ರೊ ಉಡಾಯಿಸಿದ್ದ PSLV-C62 ನೌಕೆ ಮೂರನೇ ಹಂತದ ವೇಳೆ ದಿಕ್ಕು ತಪ್ಪಿತ್ತು. ಸತತ ಪ್ರಯತ್ನದ ನಡುವೆಯೂ ನಿಯಂತ್ರಣಕ್ಕೆ ಸಿಗದ ನೌಕೆ ವಿಫಲವಾಗಿದ್ದು ಮಂಗಳವಾರ ಸಮುದ್ರದಲ್ಲಿ ಪತನಗೊಂಡಿದೆ.
PSLV-C62 ನೌಕೆ 16 ಉಪಗ್ರಹಗಳನ್ನು ಹೊತ್ತೊಯ್ದಿದ್ದು, ಇದರಲ್ಲಿ ಸ್ಪೇನ್ ನ ಫುಟ್ಬಾಲ್ ಗಾತ್ರದ ಸಹ ಪ್ರಯಾಣಿಕವಾಗಿ ಪರೀಕ್ಷಾರ್ಥವಾಗಿ ಕಳುಹಿಸಲಾಗಿದ್ದ ಉಪಗ್ರಹ ಹೊರತುಪಡಿಸಿ ಉಳಿದ 15 ಉಪಗ್ರಹಗಳು ಪತನದ ವೇಳೆ ಗುರುತ್ವಾಕಾರ್ಷಣಾ ಶಕ್ತಿಗೆ ಬೆಂಕಿ ಹೊತ್ತಿಕೊಂಡು ಉರಿದು ಹೋಗಿವೆ.
ಕೆಐಡಿ ಕ್ಯಾಪ್ಸೊಲ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಪಿಎಸ್ ಎಲ್ ವಿ ಸಿ62 ನೌಕೆಯಿಂದ ಯಶಸ್ವಿಯಾಗಿ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕ್ರಿಯೆಯ 3 ನಿಮಿಷಗಳ ವೀಡಿಯೊ ಇಸ್ರೊಗೆ ಲಭ್ಯವಾಗಿದೆ. ಪತನದ ವೇಳೆ ಅತ್ಯಂತ ಶಾಖ ಹಾಗೂ -28 ಡಿಗ್ರಿಗಿಂತಲೂ ಕಡಿಮೆ ತಪಮಾನ ಎರಡನ್ನೂ ಉಪಗ್ರಹ ಸಹಿಸಿಕೊಂಡಿದೆ. ಭಾರತೀಯ ಸೇನೆಯ ಗುಪ್ತಚಾರಿಕೆಗಾಗಿ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ `ಅನ್ವೇಷ’ ಸೇರಿದಂತೆ ಹಲವು ಮಹತ್ವದ ಉಪಗ್ರಹಗಳು ನಾಶಗೊಂಡಿದೆ.
ರಾಕೆಟ್ ದಕ್ಷಿಣ ಹಿಂದೂ ಮಹಾಸಾಗರದ ದೂರದ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡು ಬಿದ್ದಿದೆ ಎಂದು ವರದಿಯಾಗಿದೆ, ಉಪಗ್ರಹಗಳು ವಾತಾವರಣದ ಘರ್ಷಣೆಯಿಂದ ಸುಟ್ಟು ಹೋಗಿರಬಹುದು. ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಘಟನೆಯ ತಾಂತ್ರಿಕ ವಿಶ್ಲೇಷಣೆಗಾಗಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ.


