ತುಮಕೂರು ಜಿಲ್ಲೆಯ ಕೊರಟಗೆರೆ ಯಾದಗೆರೆ ಗ್ರಾಮದಲ್ಲಿ ಫೀಸ್ ಕಟ್ಟದ ೪೦ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಶಾಲಾ ಆಡಳಿತ ಮಂಡಳಿ ಹೊರಗಡೆ ನಿಲ್ಲಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ನಡದ ಕನ್ನಡ ಮತ್ತು ಮಂಗಳವಾರ ನಡೆದ ಇಂಗ್ಲಿಷ್ ಪರೀಕ್ಷೆ ಬರೆಯಲು ಅವಕಾಶ ನೀಡದೆ ೧ರಿಂದ ೮ನೇ ತರಗತಿಯ ೪೦ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಲಾಗಿತ್ತು.
ಇದು ನಡೆದಿರುವುದು ಯಾದಗೆರೆ ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ, ಇಲ್ಲಿನ ಮುಖ್ಯ ಶಿಕ್ಷಕಿ ಮತ್ತು ಆಡಳಿತ ಮಂಡಳಿಯ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ೧ರಿಂದ ೧೦ರವರಗೆ ೮೯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಫೀಸ್ ಕಟ್ಟಿದ ಮಕ್ಕಳನ್ನು ಮಾತ್ರ ಪರೀಕ್ಷೆ ಬರೆಯಲು ಒಳಗಡೆ ಕಳುಹಿಸಿ ಇತರರನ್ನು ಹೊರಗಡೆ ನಿಲ್ಲಿಸಲಾಗಿತ್ತು. ಈ ಶಾಲೆಯಲ್ಲಿ ೮೯ ಮಕ್ಕಳಿಗೆ ೪ ಶೌಚಾಲಯವಿದ್ದು, ಶಾಲಾ ಬಸ್ಸಿನಲ್ಲಿ ಸಿಸಿಟಿವಿ ಇಲ್ಲ. ನಿರ್ಮಾಣ ಹಂತದ ಕಟ್ಟಡದಲ್ಲೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ವಿದ್ಯಾರ್ಥಿಗಳ ಟಿಸಿ ನೀಡುವಂತೆ ಆಗ್ರಹಿಸಿದ್ದಾರೆ. ಕನ್ನಡವೇ ಗೊತ್ತಿಲ್ಲದ ಗೋವಾ ಮೂಲದ ಮುಖ್ಯಶಿಕ್ಷಕಿಗೆ ಕೊರಟಗೆರೆ ಪಿಎಸ್ಐ ಚೇತನಗೌಡ ಬುದ್ಧಿ ಹೇಳಿದ್ದು, ಸಮಸ್ಯೆ ಪರಿಹರಿಸಲು ಕೋರಿದ್ದಾರೆ.