ಈರುಳ್ಳಿ ಬೆಲೆ ಕುಸಿತಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ತೀವ್ರ ಆಕ್ರೋಶಗೊಂಡು ತಾವು ಬೆಳೆದ ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಕ್ವಿಂಟಾಲ್ಗೆ 250 ರೂಪಾಯಿ ದರ ನಿಗದಿಯಾಗಿರುವುದರಿಂದ ಆಕ್ರೋಶಗೊಂಡ ರೈತರಾದ ನಂದಪ್ಪ ಗುಡ್ಡದ ಮತ್ತು ಮಲ್ಲಿಕಾರ್ಜುನ ಗೋಲಗೊಂಡ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ಹೊರಳಾಡಿ ಪ್ರತಿಭಟನೆ ನಡೆಸಿದ್ದಾರೆ. ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂದಪ್ಪ ಗುಡ್ಡದ ಮತ್ತು ಮಲ್ಲಿಕಾರ್ಜುನ ಗೋಲಗೊಂಡ ಎಂಬ ರೈತರು ಎಕರೆಗಟ್ಟಲೆ ಈರುಳ್ಳಿ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್ಗೆ 250 ರೂಪಾಯಿಗೆ ಕುಸಿದಿದ್ದು, ಇದರಿಂದ ರೈತರು ಕೃಷಿ ವೆಚ್ಚವನ್ನೂ ಮರಳಿ ಪಡೆಯಲಾಗದ ಸ್ಥಿತಿ ಉದ್ಭವಿಸಿದೆ. ಹೀಗಾಗಿ ಸಿಟ್ಟಿಗೆದ್ದ ರೈತರು ಬೆಳೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಿದು, ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿ, ಈರುಳ್ಳಿಯನ್ನು ಖರೀದಿಸಲು ತಕ್ಷಣದಿಂದ ಕ್ರಮ ಕೈಗೊಳ್ಳುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈರುಳ್ಳಿ ಬೆಲೆ ಕುಸಿತದಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಈ ಪ್ರತಿಭಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.