ಅಟ್ರಾಸಿಟಿ ಕೇಸ್ ನಲ್ಲಿ ಜೈಲು ಸೇರಿದ್ದ ಭದ್ರಾವತಿಯ ಜೆಡಿಎಸ್ ಕಾರ್ಯಕರ್ತ ಕಿರಣ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಹಲ್ಲೆ ನಡೆಸಿರುವುದಾಗಿ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡರ ಪುತ್ರ ಅಜಿತ್ ಗೌಡ ಆರೋಪಿಸಿದ್ದು, ಫೇಸ್ಬುಕ್ನಲ್ಲಿ ಹಲ್ಲೆಯ ವೀಡಿಯೊ ಪೋಸ್ಟ್ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ಜೈಲಿನೊಳಗೆ ಈ ಹಲ್ಲೆ ನಡೆದಿರುವುದಾಗಿ ಜೆಡಿಎಸ್ ಮುಖಂಡ ಅಜಿತ್ ಗೌಡ ಆರೋಪಿಸಿದ್ದಾರೆ.
ಹಲ್ಲೆಯ ವೀಡಿಯೊ ವೈರಲ್ ಆಗಿದ್ದು, ಶಿವಮೊಗ್ಗ ಜೈಲು ಅಧೀಕ್ಷಕರು ದೂರು ದಾಖಲಿಸಿಕೊಂಡಿದ್ದಾರೆ. ವಿಚಾರಣಾಧೀನ ಕೈದಿಗೆ ಥಳಿಸಿ ಮೊಬೈಲ್ ವೀಡಿಯೊ ದಾಖಲಿಸಲಾಗಿದೆ. ಈ ಸಂಬಂಧ ಜೈಲು ಅಧೀಕ್ಷಕ ರಂಗನಾಥ್ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಹಲ್ಲೆ ಮಾಡಿರುವ ಪರಶುರಾಮ್, ಪ್ರದೀಪ್, ಅಪ್ಪು, ಹನುಮಂತ ನಾಯ್ಕ್ ಹಾಗೂ ಶಬರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ಮೊಬೈಲ್ ಬಳಕೆ ಸಂಬಂಧವೂ ದೂರಿನಲ್ಲಿ ಉಲ್ಲೇಖವಾಗಿದೆ. ವೀಡಿಯೊ ವೈರಲ್ ಮೂಲಕ ಜೈಲಿನಲ್ಲಿ ಮೊಬೈಲ್ ಬಳಕೆ ಸಾಬೀತಾಗಿದೆ. ಮೊಬೈಲ್ ನಿಷೇಧ, ಜಾಮರ್ ಇದ್ದರೂ ಜೈಲಿನ ಕುಮುದ್ವತಿ ವಿಭಾಗದ ಸೆಲ್.ನಂ 32 ರಲ್ಲಿ ಮೊಬೈಲ್ ಬಳಕೆಯಾಗಿದೆ. ತಪಾಸಣೆ ವೇಳೆ ರೆಡ್ಮಿ ಆ್ಯಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ.
ವಿವಿಧ ಹಂತದ ತಪಾಸಣೆ ನಡುವೆಯೂ ಮೊಬೈಲ್ ಜೈಲ್ ಒಳ ಹೋಗಿದ್ದು, ಹೇಗೆ, ಕೈದಿಗಳಿಗೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.