ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಪೊಲೀಸರು ಕಸ್ಟಡಿ ವಿಸ್ತರಣೆಗೆ ಕೋರದ ಮತ್ತು ಬಂಧಿತನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸದ ಕಾರಣ ಪ್ರಕರಣವೊಂದರಲ್ಲಿ ಯುವಕನಿಗೆ ಹೈಕೋರ್ಟ್ ಜಾಮೀನು ನೀಡಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಮಂಡ್ಯ ಹುಬ್ಬನಹಳ್ಳಿ ಗ್ರಾಮದ ಎಚ್.ವಿ.ಚರಣ್ ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿ ಪರಿಗಣಿಸಿ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಜಾಮೀನು ನೀಡಿದೆ.
ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳಸಿ ನಂತರ ಬೇರೆ ಜಾತಿಗೆ ಸೇರಿದ್ದಾರೆಂಬ ಕಾರಣಕ್ಕೆ ಮದುವೆಯನ್ನು ನಿರಾಕರಿಸಿದ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯನ್ನು 2025ರ ಸೆ.15ರಂದು ಪೊಲೀಸರು ಬಂಧಿಸಿದ್ದರು. ಕೋರ್ಟ್ ಆರೋಪಿಯನ್ನು ಸೆ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆ ಅವಧಿ ಬಳಿಕ ತನಿಖಾಧಿಕಾರಿ ಆರೋಪಿಯ ನ್ಯಾಯಾಂಗ ಬಂಧನ ಅವಧಿಯ ವಿಸ್ತರಣೆಗೆ ಅರ್ಜಿ ಸಲ್ಲಿಸಲಿಲ್ಲ, ಕೋರ್ಟ್ ಮುಂದೆ ಹಾಜರುಪಡಿಸಲೂ ಇಲ್ಲ. ಆದರೆ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಅ.10ರವರೆಗೆ ವಿಸ್ತರಿಸಲಾಗಿದೆ. ಅದಕ್ಕೆ ಸಕಾರಣಗಳನ್ನು ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಮೂದಿಸಿಲ್ಲ. ಈ ಕುರಿತು ತರಿಸಿಕೊಂಡ ವರದಿಯಲ್ಲಿ ತನಿಖಾಧಿಕಾರಿಗಳು, ಆರೋಪಿಯನ್ನು ಖುದ್ದಾಗಲಿ ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕವಾಗಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ.
ವೀಡಿಯೊ ಕಾನ್ಫರೆನ್ಸ್ ಅಥವಾ ಖುದ್ದಾಗಿ ಬಂಧಿತನನ್ನು ಕೋರ್ಟ್ಗೆ ಹಾಜರುಪಡಿಸದಿದ್ದರೆ ಆತನ ಬಂಧನ ಅವಧಿ ಮುಂದುವರಿಯದು, ಹೊಸ ರಿಮಾಂಡ್ ಆದೇಶ ಹೊರಡಿಸಬೇಕು. ಆದೇಶವಿಲ್ಲದೆ ಬಂಧಿತನ ರಿಮಾಂಡ್ ಅವಧಿ ವಿಸ್ತರಿಸಿರುವುದು ಅಥವಾ ಜೈಲು ವಾರಂಟ್ನಲ್ಲಿ ಬಂಧಿತನ ಮುಂದಿನ ಹಾಜರಾತಿ ದಿನಾಂಕ ನಮೂದಿಸುವುದು ಕಾನೂನುಬಾಹಿರ. ಹೀಗಾಗಿ ಆತ ಜಾಮೀನು ಪಡೆಯಲು ಅರ್ಹ ಎಂದು ಹೈಕೋರ್ಟ್ ತಿಳಿಸಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಳ್ಳಾರಿಯ ಸಂತ್ರಸ್ತೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿ, ‘ನಾನು ಚಿಕ್ಕಲಕ್ಕಸಂದ್ರದ ಹೋಟೆಲ್ವೊಂದರಲ್ಲಿ ಕ್ಯಾಷಿಯರ್ ಆಗಿದ್ದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರೋಪಿ ಎಚ್.ವಿ. ಚರಣ್ ಅದೇ ಹೋಟೆಲ್ನಲ್ಲಿ ಜ್ಯೂಸ್ ಸೆಂಟರ್ ನಿರ್ವಹಿಸುತ್ತಿದ್ದ. 2024ರ ನವೆಂಬರ್ನಲ್ಲಿ ಪ್ರೀತಿಸುವುದಾಗಿ ಹೇಳಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ 2024ರ ನ.20ರಿಂದ 2025ರ ಆ.14ರವರೆಗೆ ಒಂದೇ ಮನೆಯಲ್ಲಿ ವಾಸವಿದ್ದೆವು. ಮದುವೆ ಭರವಸೆ ನೀಡಿ ಚರಣ್ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಾನು ಗರ್ಭಿಣಿಯಾಗಿದ್ದೆ. ಚರಣ್ ನನಗೆ ಗರ್ಭಪಾತ ಮಾಡಿಸಿದ್ದ. ನಾನು ಪರಿಶಿಷ್ಟ ಪಂಗಡದ ಜಾತಿಗೆ ಸೇರಿರುವ ಕಾರಣ ಮದುವೆಗೆ ನಿರಾಕರಿಸಿದ್ದ. ಮದುವೆ ಪ್ರಸ್ತಾವನೆ ತಂದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದರು. ದೂರು ಅನ್ವಯ ಪೊಲೀಸರು, ಚರಣ್ ವಿರುದ್ಧ ಎಫ್ಐಆರ್ ದಾಖಲಿಸಿ 2025ರ ಸೆ.19ರಂದು ಚರಣ್ನನ್ನು ಬಂಧಿಸಿದ್ದರು.


