ಪ್ರಕರಣವೊಂದರಿಂದ ಕೈಬಿಡುವುದಕ್ಕಾಗಿ ಐದು ಲಕ್ಷ ರೂ. ಲಂಚ ಕೇಳಿ ಹಣ ಪಡೆದುಕೊಳ್ಳುವಾಗ ಬೆಂಗಳೂರಿನ ಕೆ.ಪಿ. ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇನ್ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದವರು. ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದ ಇನ್ಸ್ಪೆಕ್ಟರ್ ಆರೋಪಿಗಳ ಬಂಧನಕ್ಕೆ ತೆರಳಿದ್ದಾಗ ಪ್ಲಾಟ್ನಲ್ಲಿ ಆರೋಪಿಗಳು ತಡೆದಿದ್ದಾರೆ. ಪೊಲೀಸರು ಮನೆಗೆ ಬರುವ ಸಿಸಿಟಿವಿ ಹಾಗೂ ವೀಡಿಯೊ ಕೂಡ ಮಡಿದ್ದಾರೆ. ನೋಟಿಸ್ ಕೊಡದೆ ಬಂದಿದ್ದೀರಿ, ವಕೀಲರ ಬಳಿ ನಾವು ಮಾತನಾಡಬೇಕು ಎಂದು ಆರೋಪಿಗಳು ಪಟ್ಟುಹಿಡಿದಿದ್ದರು. ಪೊಲೀಸರು ಬಳಿಕ ಹೊಯ್ಸಳ ಕರೆಯಿಸಿ ಆರೋ[ಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.
ಸ್ಟೇಷನ್ಗೆ ಹೋದ ಮೇಲೆ ಸೆಟ್ಲ್ಮೆಂಟ್ ಡೀಲ್ ಮಾಡಿಕೊಂಡು ಕೇಸ್ನಿಂದ ಕೈ ಬಿಡಲು ಐದು ಲಕ್ಷ ರೂಪಾಯಿ ನೀಡುವಂತೆ ಇನ್ಸ್ಪೆಕ್ಟರ್ ಕೇಳಿದ್ದರು. ಮೊದಲು ಒಂದು ಲಕ್ಷ ರೂಪಾಯಿ ತರಿಸಿಕೊಂಡಿದ್ದರು. ಬಳಿಕ ನಾಲ್ಕು ಲಕ್ಷ ರೂಪಾಯಿ ತರುವಂತೆ ಸೂಚನೆ ನೀಡಿದ್ದರು. ನಾಲ್ಕು ಲಕ್ಷ ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಬಳಿ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. ಇನ್ಸ್ಪೆಕ್ಟರ್ ಗೋವಿಂದರಾಜುವನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.


