ಪೋಕ್ಸೋ ಪ್ರಕರಣದ ಆರೋಪಿ, ಚಿತ್ರದುರ್ಗ ಮುರುಘಾಮಠದ ಮಾಜಿ ಪೀಠಾಧಿಪತಿ ಶಿವಮೂರ್ತಿ ಅವರನ್ನು ಎರಡನೇ ಜಿಲ್ಲಾ ಅಪರ ಮತ್ತು ಸತ್ರ ಕೋರ್ಟ್ ಖುಲಾಸೆಗೊಳಿಸಿದೆ. ಸತತ ಮೂರು ವರ್ಷ ಪ್ರಕರಣದ ವಿಚಾರಣೆ ನಡೆದಿದೆ.
ದಾವಣಗೆರೆಯ ವಿರಕ್ತ ಮಠದಿಂದ ಬಿಗಿ ಭದ್ರತೆಯಲ್ಲಿ ಆರೋಪಿ ಶಿವಮೂರ್ತಿ ಕೋರ್ಟ್ಗೆ ಹಾಜರಾಗಿದ್ದರು. ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.
ಶಿವಮೂರ್ತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮುರುಘಾ ಮಠದ ಹಾಸ್ಟೆಲ್ನ ಇಬ್ಬರು ಬಾಲಕಿಯರು ಆರೋಪಿಸಿದ್ದರು. 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆಗಸ್ಟ್ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. ಪ್ರಕರಣದಲ್ಲಿ 2022ರ ಸೆ.1ರಂದು ಮುರುಘಾ ಶಿವಮೂರ್ತಿ, ವಾರ್ಡನ್ ರಶ್ಮಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
2022ರ ಅ.13 ರಂದು ಮಠದ ಅಡುಗೆ ಸಹಾಯಕಿ ಮತ್ತೊಂದು ದೂರು ನೀಡಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದರು. 2023ರ ಜ.10ರಂದು 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು. ಒಂದನೇ ಪ್ರಕರಣದ ತೀರ್ಪು ಬಂದಿದ್ದು ಎರಡನೇ ಪ್ರಕರಣದ ತೀರ್ಪು ಇನ್ನಷ್ಟೇ ಹೊರಬರಬೇಕಿದೆ.


