ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನ ತಾರತಮ್ಯ ಖಂಡಿಸಿ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಹತ್ತಿಕ್ಕಲು ಪಾಕ್ ಸರ್ಕಾರ ಲಾಠಿ ಚಾರ್ಜ್, ಗೋಲಿಬಾರ್ ನಡೆಸಿದ್ದು, ಪೊಲೀಸರು ಮತ್ತು ಸೇನೆಯ ಗುಂಡಿನ ದಾಳಿಗೆ ಗುರುವಾರ 12 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಕಳೆದ 4 ದಿನಗಳಲ್ಲಿ 38 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಮ್ಮು ಕಾಶ್ಮೀರ ಜಂಟಿ ಆವಾಮಿ ಕಾರ್ಯಸಮಿತಿ ಈ ಪ್ರತಿಭಟನೆ ನಡೆಸುತ್ತಿದ್ದು, ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು, ವ್ಯಾಪಾರ, ವಹಿವಾಟು ಬಂದ್ ಮಾಡಿ, ಸಾರಿಗೆ ಸಂಚಾರ ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಿದ್ದಾರೆ.
ಮುರ್ಷಿದಾಬಾದ್, ಕೋಟ್ಲಿ, ರಾವಲ್ಕೋಟ್, ನೀಲಂ ವ್ಯಾಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದ ಸೇನೆ ನಿಯೋಜನೆಗೊಂಡಿದೆ. ಮೊಬೈಲ್ ಹಾಗೂ ಇಂರ್ಟನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೋರಾಟಗಾರರನ್ನು ಮಣಿಸಲು ಸರ್ಕಾರ ಲಾಠಿಚಾರ್ಜ್ ಮತ್ತು ಗೋಲಿಬಾರ್ಗೆ ಆದೇಶಿಸಿದೆ.
ಇಷ್ಟಾದರೂ ಹೋರಾಟಗಾರರ ಪ್ರತಿಭಟನೆ ಕಿಚ್ಚು ಹೆಚ್ಚುರುವುದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆತಂಕಕ್ಕೆ ದೂಡಿದೆ. ಪ್ರತಿಭಟನಾಕಾರರ ಜೊತೆಗೆ ಸಂಧಾನಕ್ಕಾಗಿ ಪಾಕ್ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ಪಿಒಕೆಗೆ ಕಳುಹಿಸಿಕೊಟ್ಟಿದೆ.