ಬಿಜೆಪಿ ರಾಜ್ಯದಲ್ಲಿ ಒಂಬತ್ತು ವರ್ಷ ಅಧಿಕಾರ ನಡೆಸಿದ್ದರೂ ಒಮ್ಮೆಯೂ ಜನಾಭಿಪ್ರಾಯ ಪಡೆದು ಅಧಿಕಾರಕ್ಕೆ ಬರಲಿಲ್ಲ. ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಪೂರ್ಣ ಬಹುಮತ ಕೊಟ್ಟಿಲ್ಲ. ಎಂಟು ಜನ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಬಳಿಕ ಚುನಾವಣೆಯಲ್ಲೂ 25-30 ಕೋಟಿ ಖರ್ಚು ಮಾಡಿ ಅಧಿಕಾರ ಪಡೆದರು. ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭಿಸಿದ್ದೇ ಯಡಿಯೂರಪ್ಪ. ಎರಡೂ ಬಾರಿ ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದ ಇತಿಹಾಸ ಬಿಜೆಪಿಯದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಪ ಚುನಾವಣೆ ಪ್ರಯುಕ್ತ ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎರಡು ಕಡೆ ಉಪ ಚುನಾವಣೆ ನಡೆಯುತ್ತಿದೆ. ಸ್ವತಃ ಭ್ರಷ್ಟಾಚಾರಿ ಆಗಿರುವ ಯಡಿಯೂರಪ್ಪ ನನ್ನನ್ನು ಭ್ರಷ್ಟಚಾರಿ ಎನ್ನುತ್ತಿದ್ದಾರೆ. ನನ್ನನ್ನು ವಿಶ್ವಾಸ ದ್ರೋಹಿ ಎನ್ನುತ್ತಿದ್ದಾರೆ. ನನಗೆ ಬಯ್ಯುವ ಮೂಲಕ ಮತ ಕೇಳುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ ಸಂವಿಧಾನ ವಿರೋಧಿ-ಮಹಿಳಾ ವಿರೋಧಿ-ರೈತ ಕಾರ್ಮಿಕರ ವಿರೋಧಿ-ಹಿಂದುಳಿದವರ-ದಲಿತರ ವಿರೋಧಿಯಾಗಿರುವುದು ಮಾತ್ರವಲ್ಲ, ಕೇಂದ್ರದ ಮೋದಿ ಸರ್ಕಾರ ಕನ್ನಡ ವಿರೋಧಿಯಾಗಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಎಚ್.ವೈ.ಮೇಟಿ ಅತ್ಯಂತ ನಿಯತ್ತಿನ ಮನುಷ್ಯ. ನನಗೆ ಅತ್ಯಂತ ಆತ್ಮೀಯರು. ಕಾಂಗ್ರೆಸ್ ಪಕ್ಷದ ನಿಯಮದಂತೆ ನಿಧನರಾದ ಶಾಸಕರ ಕುಟುಂಬದ ಉಮೇಶ್ ಮೇಟಿಯವರಿಗೇ ಟಿಕೆಟ್ ನೀಡಲಾಗಿದೆ. ಇವರನ್ನು ಗೆಲ್ಲಿಸುವ ಮೂಲಕ ಮೇಟಿಯವರ ಅಭಿವೃದ್ಧಿ ಕೆಲಸಗಳು ಮುಂದುವರೆಸಲು ಸಹಕರಿಸಿ ಎಂದು ಮನವಿ ಮಾಡಿದರು. ಮಂತ್ರಿಯಾಗಿದ್ದ ಮೇಟಿಯವರು ಪಕ್ಷದ ತೀರ್ಮಾನಕ್ಕೆ ತಲೆ ಬಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ಇವರ ವ್ಯಕ್ತಿತ್ವದಲ್ಲಿತ್ತು ಎಂದರು.


