Menu

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ: ನಿಯಮ ಉಲ್ಲಂಘನೆಗೆ ದಂಡಾಸ್ತ್ರ

ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ-2024ರಲ್ಲಿ ನಿಯಮಗಳ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಕುರಿತು ಉಲ್ಲೇಖಿಸಲಾಗಿದೆ.

ನಿಯಮ ಉಲ್ಲಂಘಕರ ವಿರುದ್ಧ ‘ದಂಡಾಸ್ತ್ರ’ ಪ್ರಯೋಗಿಸುವ ವಿವರಗಳನ್ನು ನಮೂದಿಸಲಾಗಿದೆ. ಹಾಗಾಗಿ ಹಾಲಿ ಇರುವ ಬಿಬಿಎಂಪಿ ಕಾಯಿದೆ-2020ರ ನಿಯಮಗಳನ್ನು ಹಗುರವಾಗಿ ಪರಿಗಣಿಸಿದಂತೆ ಸಾರ್ವಜನಿಕರು ಬೆಂಗಳೂರು ಆಡಳಿತ ವಿಧೇಯಕ ನಿಯಮಗಳನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ.
ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಜಾರಿಯಾದ ಬಳಿಕ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರಿ ದಂಡ ಹಾಕಲಾಗುತ್ತದೆ.ಜಿಬಿಎ ನಿಯಮ ಉಲ್ಲಂಘಿಸಿದರೆ ಆರು ತಿಂಗಳ ಸೆರೆವಾಸ ಅಥವಾ ಎರಡು ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ.

ಪಾಲಿಕೆ ಸ್ವತ್ತಿನ ಅನಧಿಕೃತ ಬಳಕೆಗೆ ಮೂರು ತಿಂಗಳು ಜೈಲು, 50 ಸಾವಿರ ಜುಲ್ಮಾನೆ, ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ವಾಹನಗಳನ್ನು ನಿಲ್ಲಿಸಿದರೆ ಅಥವಾ ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಅದಕ್ಕೂ ದಂಡ ವಿಧಿಸುವ ಪ್ರಸ್ತಾವವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

ನಾಗರಿಕರು ಜಿಬಿಎ ಅನುಷ್ಠಾನದ ನಂತರ ನಿಯಮ ಉಲ್ಲಂಘನೆ ಮುನ್ನ ಎಚ್ಚರ ವಹಿಸಬೇಕಾಗುತ್ತದೆ.ನಿಯಮ 326ರ ಅನ್ವಯ ಶೌಚಾಲಯ, ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ, ರಸ್ತೆ ಬದಿ ಚರಂಡಿಯ ಅವ್ಯವಸ್ಥೆಗಳಿಗೆ ಕಾರಣವಾದರೆ ಮತ್ತು ರಸ್ತೆಗಳಿಗೆ ತ್ಯಾಜ್ಯ ನೀರು ಅಥವಾ ಕೊಳೆ ಹರಿಸಿದರೆ ಮೊದಲ ಸಲದ ಉಲ್ಲಂಘನೆಗೆ ಒಂದು ಸಾವಿರ ರೂ.ವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ.

ಆನಂತರವೂ ಉಲ್ಲಂಘನೆ ಮುಂದುವರಿಸುವ ಅವಧಿಯಲ್ಲಿ ದಿನಕ್ಕೆ 300 ರೂ.ವರೆಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಜತೆಗೆ ಮುಖ್ಯ ಆಯುಕ್ತರು ನೋಟಿಸ್‌ ಜಾರಿಗೊಳಿಸಿ ಹೆಚ್ಚುವರಿ ದಂಡವನ್ನೂ ವಿಧಿಸಬಹುದಾಗಿದೆ.

ತ್ಯಾಜ್ಯ ನಿರ್ವಹಣೆ ಕಡ್ಡಾಯ: ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕೂಡ ಮತ್ತಷ್ಟು ಬಿಗಿಗೊಳಿಸಲಾಗಿದೆ. ಅದರಂತೆ ತ್ಯಾಜ್ಯ ನಿರ್ವಹಣೆ ನಿಯಮಗಳು ಅಥವಾ ಉಪವಿಧಿಗಳನ್ನು ಪಾಲಿಸಲು ವಿಫಲವಾದ ವ್ಯಕ್ತಿಗೆ ಎರಡು ಲಕ್ಷ ರೂ. ವರೆಗೆ ದಂಡ ವಿಧಿಸಲು 20ನೇ ಅಧ್ಯಾಯದ 282ನೇ ನಿಯಮದಲ್ಲಿಅವಕಾಶ ಕಲ್ಪಿಸಲಾ ಗಿದೆ.  ಪರವಾನಗಿ ಪಡೆದ ಸ್ಥಳದಲ್ಲಿ ನೂರಕ್ಕಿಂತ ಅಧಿಕ ಜನರು ಸೇರುವ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭವನ್ನು ಆಯೋಜಿಸುವ ಪ್ರತಿಯೊಬ್ಬ ವ್ಯಕ್ತಿಯು ಘನತ್ಯಾಜ್ಯ ವಿಂಗಡಣೆಯನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಇಲ್ಲವಾದರೆ ಅದಕ್ಕೂ ದಂಡ ತೆರಬೇಕಾಗುತ್ತದೆ.

ಜಿಬಿಎ ಅಧ್ಯಾಯ 21ರಲ್ಲಿ ಯಾವುದೇ ರೀತಿಯ ಉಪಟಳ ಅಥವಾ ಉಪದ್ರವ ನೀಡುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಸಾರ್ವಜನಿಕ ಬೀದಿ ಅಥವಾ ಸ್ಥಳದಲ್ಲಿ ಯಾವುದೇ ಉಪದ್ರವವನ್ನು ಯಾರಿಗೂ ನೀಡುವಂತಿಲ್ಲ. ಯಾವುದೇ ಕಟ್ಟಡ, ಸ್ಮಾರಕ, ಕಂಬ, ಗೋಡೆ, ಬೇಲಿ, ಮರದ ಮೇಲೆ ಅಥವಾ ಇತರ   ಸಾರ್ವ ಜನಿಕ ಜಾಗದಲ್ಲಿ ಯಾವುದೇ ಕರಪತ್ರ, ನೋಟಿಸ್‌ ಅಥವಾ ಇತರೆ ಭಿತ್ತಿಪತ್ರಗಳನ್ನು ಅಂಟಿಸತಕ್ಕದ್ದಲ್ಲ. ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸುಂತಿಲ್ಲ. ರಸ್ತೆ ಯಲ್ಲಿ ಹೊಲಸು, ಕಸ ಮತ್ತು ಇತರೆ ಮಾಲಿನ್ಯಕಾರಕ ಪದಾರ್ಥಗಳನ್ನು ಸಾಗಿಸುವಂತಿಲ್ಲ. ನೆರೆ ಹೊರೆಯವರಿಗೆ ತೊಂದರೆಯಾಗುವಂತೆ ಪರವಾನಗಿ ಇಲ್ಲದ ಸ್ಥಳಗಳಲ್ಲಿ ಶವಗಳನ್ನು ಹೂಳುವಂತಿಲ್ಲ.

ವಸತಿ ಪ್ರದೇಶಗಳಲ್ಲಿ ಅನುಮತಿ ಇಲ್ಲದೆ ಮರಗಳನ್ನು ಕತ್ತರಿಸತಕ್ಕದ್ದಲ್ಲ, ಕಲ್ಲುಗಣಿಗಾರಿಕೆ ಮತ್ತಿತರ ಸ್ಫೋಟ ನಡೆಸುವಂತಿಲ್ಲ. ಜತೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ವಾಹನ ಅಥವಾ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವಂತಿಲ್ಲ. ಹಾಗೊಂದು ವೇಳೆ ನಿಯಮ ಉಲ್ಲಂಘಿಸಿದರೆ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ.

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ-2024ಕ್ಕೆ ಈಗಾಗಲೇ ವಿಧಾನಮಂಡಲದ ಉಭಯ ಸದನಗಳು ಅನುಮೋದನೆ ನೀಡಿದ್ದು, ಸದ್ಯ ರಾಜ್ಯಪಾಲರ ಸಹಿ ಮಾತ್ರ ಬಾಕಿ ಇದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿಧೇಯಕಕ್ಕೆ ಸಹಿ ಹಾಕಿದ ನಂತರ ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ ಬಳಿಕ ಜಾರಿಯಾಗುತ್ತದೆ. ಆನಂತರ ವಿಧೇಯಕದಲ್ಲಿನ ನಿಯಮಗಳ ಅನುಸಾರ ಉಪನಿಯಮಗಳನ್ನು ರಚಿಸಿ ಪೂರ್ಣ ಪ್ರಮಾಣದಲ್ಲಿಶಾಸನವನ್ನು ಅನುಷ್ಠಾನಗೊಳಿಸಲಾಗುತ್ತದೆ.

Related Posts

Leave a Reply

Your email address will not be published. Required fields are marked *