“ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ.20 ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ, ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ರಾಮನಗರದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಯುವ ಪರ್ವ’ ಸಮಾವೇಶದಲ್ಲಿ ಮಾತನಾಡಿದರು.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ. ಮಹಿಳೆಯರ ಪರವಾಗಿ ಐತಿಹಾಸಿಕ ಯೋಜನೆಗಳನ್ನು ತಂದು ಇತಿಹಾಸ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಪಕ್ಷ. ಉಚಿತ ಬಸ್, ಗೃಹಲಕ್ಷ್ಮೀ ಸೇರಿದಂತೆ ಅನೇಕ ಯೋಜನೆಗಳನ್ನು ದಳ, ಬಿಜೆಪಿಯವರು ನೀಡಿದ್ದಾರೆಯೇ” ಎಂದು ಪ್ರಶ್ನಿದರು.
ಯುವ ಕಾಂಗ್ರೆಸ್ ಪಕ್ಷ ನಾಯಕತ್ವ ಬೆಳೆಸುವ ಪ್ರಯೋಗ ಶಾಲೆ. ನೀವು ನಾಯಕರಾಗಿ ಬೆಳೆಯಬೇಕು ಎಂದರೆ ತಳಮಟ್ಟದಿಂದ ಕೆಲಸ ಮಾಡಬೇಕು. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಯುವಕರಿಗೆ ನಿಮ್ಮ ಶಕ್ತಿಯ ಅರಿವಿಲ್ಲ. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು. ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನೀವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಜನರ ಮನಸ್ಸನ್ನು ಗೆಲ್ಲಬೇಕು. ನಿಮ್ಮನ್ನು ನಾಯಕರನ್ನಾಗಿ ರೂಪಿಸಬೇಕು ಎನ್ನುವುದು ನನ್ನ ಗುರಿ, ಹಿಂಬಾಲಕರನ್ನಾಗಿ ಮಾಡುವುದಲ್ಲ. ನೀವು ನನ್ನ ಸಹಪಾಠಿಗಳು ಎಂದರು.
“ಯುವ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಬೆಳೆದವರು ಪಕ್ಷವನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಬೂತ್, ಪಂಚಾಯತಿ, ವಾರ್ಡ್ ಮಟ್ಟದಲ್ಲಿ ನಿಮಗೆ ನೀಡಿದ ಜವಾಬ್ದಾರಿ ನಿಭಾಯಿಸಿದಾಗ, ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದುಕೊಟ್ಟಾಗ ಮಾತ್ರ ನೀವು ನಾಯಕರಾಗಿ ಹೊರಹೊಮ್ಮಬಹುದು. ಆಗ ಶಾಸಕರು ನಿಮ್ಮನ್ನು ಹುಡುಕಿಕೊಂಡು ಬಂದು ಅಧಿಕಾರ ನೀಡುವ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಅಧಿಕಾರ ಎಂದಿಗೂ ಶಾಶ್ವತವಲ್ಲ. ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ನಂತರ ಪ್ರಧಾನಿಯಾದರು ಅವರಿಂದ ತೆರವಾದ ಸ್ಥಾನಕ್ಕೆ ಚಿತ್ರನಟ ಅಂಬರೀಶ್ ಅವರನ್ನು ನಿಲ್ಲಿಸಿದ್ದರು. ನಾವು ಅಂದು ಹೋರಾಟ ಮಾಡಿ ಸಿ.ಎಂ.ಲಿಂಗಪ್ಪ ಅವರನ್ನು ನಿಲ್ಲಿಸಿ ಗೆಲ್ಲಿಸಿದೆವು. ಬಿಜೆಪಿ, ದಳ, ಕಾಂಗ್ರೆಸ್ ಹೀಗೆ ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. 8 ಬಾರಿ ಶಾಸಕನಾಗಿರುವ ನಾನು, ದೇಶದ ಪ್ರಧಾನಿಗಳಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ ಎನ್ನುವುದೆಲ್ಲಾ ರಾಜಕೀಯದಲ್ಲಿ ಕ್ಷಣಿಕ. ರಾಮನಗರ, ಮೈಸೂರು, ಮಂಡ್ಯದಲ್ಲಿ ನಾವು ಗೆದ್ದಿಲ್ಲವೇ. ಮೈಸೂರು ಭಾಗದಲ್ಲಿ 40 ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಸೋತಿರುವ ಕ್ಷೇತ್ರದಲ್ಲಿ ಮುಂದೆ ಗೆಲ್ಲಲು ಪ್ರಯೋಗ ಪ್ರಾರಂಭ ಮಾಡಿದ್ದೇವೆ” ಎಂದರು.
“ನಾನು ಶಾಸಕ, ಮಂತ್ರಿ ಆಗಿದ್ದಾಗಲೂ ಸಹ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಆನಂತರ ರಾಜಿನಾಮೆ ನೀಡಿ ಕೆ.ಆರ್.ಪುರಂ ನಾರಾಯಣಸ್ವಾಮಿ ಅವರು, ಆನೇಕಲ್ ಶಿವಣ್ಣ ಅವರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ದೇಶದ ಮೊದಲ ಪ್ರಧಾನಿಗಳಾದ ನೆಹರು ಅವರು ಅಲಹಾಬಾದ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನಿಸಿಪಾಲಿಟಿಯ ಸದಸ್ಯರು, ಅಧ್ಯಕ್ಷರಾಗಿದ್ದರು. ರಾಜಗೋಪಾಲಚಾರಿ, ಬಿ.ಡಿ.ಜತ್ತಿ ಹೀಗೆ ಅನೇಕರು ತಳಮಟ್ಟದಿಂದ ಬೆಳೆದು ನಾಯಕರಾಗಿ ಹೊರಹೊಮ್ಮಿದವರು” ಎಂದು ಹೇಳಿದರು.
“ಒಮ್ಮೆ ರಾಜೀವ್ ಗಾಂಧಿ ಅವರ ಬಳಿ ಸ್ಥಳೀಯ ಸಂಸ್ಥೆ ವ್ಯವಸ್ಥೆ ನಮ್ಮಲ್ಲಿ ಇದೆಯಲ್ಲಾ ಎಂದು ಕೇಳಿದ್ದೆ. ಆಗ ಅವರು ಇಡೀ ದೇಶದಲ್ಲಿ ಈ ವ್ಯವಸ್ಥೆ ಬರಬೇಕು. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೆ ನಾಯಕರ ಉಗಮವಾಗಬೇಕು ಎಂದು ಹೇಳಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ಮತ್ತು ಹಿಂದುಳಿದ ವರ್ಗಕ್ಕೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ” ಎಂದು ತಿಳಿಸಿದರು.
“ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಯಲು ಮುಂದಾಗಿದ್ದೇವೆ. ಏಕೆಂದರೆ ಇಲ್ಲಿನ ಭೂಮಿ ಮೌಲ್ಯ ಹೆಚ್ಚಾಗಲಿದೆ, ಜನರ ಬದುಕು ಬದಲಾಗಲಿದೆ. ಇದು ನಮ್ಮ ಜಿಲ್ಲೆ, ನಮ್ಮ ಸ್ವಾಭಿಮಾನ. ಬೆಂಗಳೂರಿಗೆ ನಾವು ಹೋಗುವುದು ತಪ್ಪಿ ನಮ್ಮನ್ನೇ ಬಳಸಿಕೊಳ್ಳುವ ಕಾಲ ಮುಂದಕ್ಕೆ ಬರಬೇಕು. ಸುರೇಶ್ ಅವರು ಸ್ಪರ್ಧಿಸುವ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಏಕೆ ಕರೆಯಲಾಗುತ್ತದೆ. ನಮ್ಮ ಹೆಸರನ್ನು ಬಿಟ್ಟು ಕೊಡುವುದಿಲ್ಲ” ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಎಂದು ಮಾಡಲು ಹೊರಟಿದ್ದೇವೆ. ಇದನ್ನು ಕೈ ಬಿಡಿ ಎಂದು ದೇವೆಗೌಡರು, ಸಂಸದ ಮಂಜುನಾಥ್ ಅವರು ಪತ್ರ ಬರೆದಿದ್ದರು. ಈ ಹಿಂದೆ ಇದಕ್ಕೆ ಸಹಿ ಹಾಕಿದವರು ಕುಮಾರಸ್ವಾಮಿ. ಆದರೆ ಅವರಿಗೆ ಇದನ್ನು ಮುಂದುವರೆಸಲು ಆಗುವುದಿಲ್ಲ. ಈಗ ನಾನೇಕೆ ಅದನ್ನು ಡಿನೋಟಿಫಿಕೇಷನ್ ಮಾಡಲಿ. ಕೇಸನ್ನು ಹಾಕಿಸಿಕೊಳ್ಳಲು ನಾನು ತಯಾರಿಲ್ಲ. ರೈತರಿಗೆ ನಾಲ್ಕು ಪಟ್ಟು ಪರಿಹಾರ ದೊರೆಯುವಂತೆ ಮಾಡುತ್ತೇನೆ. ಯೋಗೇಶ್ವರ್, ಇಕ್ಬಾಲ್ ಅವರೆಲ್ಲಾ ಸೇರಿ ನಿಮ್ಮ ಬದುಕನ್ನು ಭದ್ರ ಮಾಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಏಕೆ ಒಂದೇ ಒಂದು ಜಿಲ್ಲಾಸ್ಪತ್ರೆ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ತನಕ ವಿಶ್ವವಿದ್ಯಾಲಯ ಕಟ್ಟಡವಿರಲಿಲ್ಲ. ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲಾಗುತ್ತಿದೆ. ಬೆಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿಯೇ ಇಲ್ಲಿಯೂ ನೆರವೇರಿಸಲಾಗುತ್ತದೆ. ಚನ್ನಪಟ್ಟಣ ತಾಲ್ಲೂಕಿನ ಅಧ್ಯಕ್ಷರು ಎಲ್ಲರೂ ಸೇರಿ 50 ಲಕ್ಷ ದೇಣಿಗೆ ಸಂಗ್ರಹ ಮಾಡಲಾಗು ವುದು ಎಂದು ಹೇಳಿದ್ದಾರೆ. ಕನಕಪುರದಲ್ಲಿ ಇರುವ ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಿ ಆ ಹಣವನ್ನು ಸಹ ರಾಮನಗರ ಕಚೇರಿಗೆ ನೀಡಲಾಗುವುದು ಎಂದರು.
“ನಾವೊಬ್ಬರೇ ಕಚೇರಿ ಕಟ್ಟಬಹುದು. ಆದರೆ ಎಲ್ಲರೂ ಕೈ ಜೋಡಿಸಬೇಕು. ಆಗ ಮಾತ್ರ ಇದು ನನ್ನದು, ನನ್ನ ಪಕ್ಷ ಎನ್ನುವ ಅಭಿಮಾನವಿರುತ್ತದೆ. ದಾನಿಗಳ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ದಾನಿಗಳ ಹೆಸರಿರುವ ಫಲಕಗಳನ್ನು ಅಳವಡಿಸಲಾಗುವುದು. ಒಂದು ವರ್ಷದೊಳಗೆ ಜಿಲ್ಲಾ ಕಾಂಗ್ರೆಸ್ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಲಾಗುವುದು. ಕಟ್ಟಡಕ್ಕೆ ದೇಣಿಗೆ ನೀಡುವವರು ಚೆಕ್ ಮುಖಾಂತರ ನೀಡಬೇಕು ಎಂದು ಮನವಿ. 5 ರಿಂದ 2 ಲಕ್ಷದ ಒಳಗೆ ಹಣ ನೀಡಿದರು ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ರಾಮನಗರ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿರುವ ಚಂದ್ರ ಸಾಗರ್ ಮತ್ತು ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ನೂತನ ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಕೇಳಿದಾಗ, “ಈ ಹಿಂದೆ ಇದ್ದ ಜಾಗದ ವಿರುದ್ದ ಪ್ರಕರಣ ದಾಖಲಿಸಿದ ಪರಿಣಾಮ ಅದನ್ನು ಕೈ ಬಿಡಲಾಯಿತು. ಈಗ ಇರುವ ಕಚೇರಿ ಪಕ್ಕದ ಜಾಗವನ್ನು ನಾನೇ ಖರೀದಿ ಮಾಡಿ ಪಕ್ಷಕ್ಕೆ ನೀಡಿದ್ದೇನೆ. ಜನರ ಕಚೇರಿಯಾಗಬೇಕು ಎಂದು ಎಲ್ಲರಿಂದ ದೇಣಿಗೆ ಸಂಗ್ರಹ ಮಾಡಲಾಗು ತ್ತಿದೆ. ಸರ್ಕಾರಕ್ಕೆ ಎರಡು ವರ್ಷ ಸಂಭ್ರಮದ ಬಗ್ಗೆ ಕೇಳಿದಾಗ, ಮೇ.20 ಕ್ಕೆ ಸಂಭ್ರಮಾಚರಣೆ ಮಾಡುವ ಆಲೋಚನೆಯಿದೆ. ಆದರೆ ಯುದ್ದದ ಭೀತಿ ಇರುವ ಕಾರಣಕ್ಕೆ ಆಲೋಚನೆ ಮಾಡಲಾಗುತ್ತಿದೆ ಎಂದರು.
ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು. ನಾನು ಪ್ರತಿಕ್ರಿಯೆ ನೀಡಿ ಗೊಂದಲ ಮಾಡುವುದಕ್ಕೆ ಇಷ್ಟವಿಲ್ಲ. ದೇಶದ ಗೌರವ ಉಳಿಸಲು ನಾವು ಹೋರಾಟ ಮಾಡೋಣ ಎಂದು ಹೇಳಿದರು.