Saturday, September 06, 2025
Menu

ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ: ಡಿಕೆ ಶಿವಕುಮಾರ್

dcm

ಆಲಮಟ್ಟಿ ಅಣೆಕಟ್ಟು ಎತ್ತರವನ್ನು 518 ಮೀ. ನಿಂದ 524 ಮೀ. ಎತ್ತರಿಸುವ ಬಗ್ಗೆ ಆದ್ಯತೆ ಮತ್ತು ಬದ್ಧತೆ ನಮ್ಮ ಸರ್ಕಾರಕ್ಕಿದೆ. ಮುಂದಿನ ಒಂದು ವಾರದೊಳಗೆ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ಬೆಲೆ ಘೋಷಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾ ನದಿಗೆ ಶನಿವಾರ ಬಾಗಿನ ಅರ್ಪಣೆ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಮುಖ್ಯಮಂತ್ರಿಯವರು ಹಾಗೂ ಯೋಜನೆ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ನಡೆಸಿ ಬೆಲೆ ನಿಗದಿ ತೀರ್ಮಾನ ಮಾಡಲಾಗುವುದು. ಯಾವುದೇ ಮೇಲ್ಮನವಿ ಇಲ್ಲದಂತೆ ಒಂದೇ ಹಂತದ ಒಪ್ಪಿತ ಭೂಸ್ವಾಧೀನಕ್ಕೆ ಮುಖಂಡರು, ಜನಪ್ರತಿನಿಧಿಗಳು ಒಪ್ಪಿಗೆ ‌ನೀಡಬೇಕು. ಪುನರ್ವಸತಿ ಬಗ್ಗೆ ಪ್ರತ್ಯೇಕ ತೀರ್ಮಾನ ಮಾಡಲಾಗುವುದು. ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ನಮ್ಮ ಜನರಿಗೆ ನೀರಾವರಿ ಕಲ್ಪಿಸುವುದು ನಮ್ಮ ಸಂಕಲ್ಪ. ಇದನ್ನು ಇದೇ ಅವಧಿಯಲ್ಲಿ ಮಾಡಲು ಮುಂದಾಗಿದ್ದೇವೆ” ಎಂದರು.

“ಮುಳುಗಡೆ ಜಮೀನುಗಳಿಗೆ ಉದಾರ ಮನಸ್ಸಿನಿಂದ ಪರಿಹಾರ ನೀಡಬೇಕು. ಕಾಲುವೆಗಳು ಹಾದು ಹೋಗುವ ಕಡೆ ರೈತರಿಗೆ ಅನುಕೂಲವಾಗುವುದರಿಂದ ಇಂತಿಷ್ಟೇ ಪರಿಹಾರ ಬೇಕು ಎನ್ನುವ ಬೇಡಿಕೆಯಿಲ್ಲ ಎಂದು ಶಾಸಕರಾದ ಯಶವಂತರಾಯ ಗೌಡ ಪಾಟೀಲರು ಅಭಿಪ್ರಾಯ ತಿಳಿಸಿದ್ದಾರೆ. ಶಿವಾನಂದ ಪಾಟೀಲರು, ಎಂ.ಬಿ.ಪಾಟೀಲರು ಸಹ ತಮ್ಮ ಸಲಹೆಗಳನ್ನು ನೀಡಿದ್ದಾರೆ” ಎಂದರು.

“ನಾವು ಕೇಂದ್ರದ ಮೇಲೆ ಹಾಕುತ್ತಿರುವ ಒತ್ತಡ ನೋಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ಅಧಿಸೂಚನೆ ಹೊರಡಿಸಬಹುದು. ನಮ್ಮ ಪಾಲು ನಮಗೆ ಸಿಗಲೇಬೇಕು. ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ನಾವು ಎಲ್ಲಾ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ” ಎಂದರು.

“ಈ ವಿಚಾರವಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವರನ್ನು ಮುಖ್ಯಮಂತ್ರಿಯವರು, ನಾನು ಹಾಗೂ ಸಣ್ಣ ನೀರಾವರಿ ಸಚಿವರು ಮನವಿ ಮಾಡಿದ್ದೆವು. ನಾನು ಸುಮಾರು ಐದು ಬಾರಿ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಧಾನಿಯವರ ಗಮನಕ್ಕೂ ಇದನ್ನು ತರಲಾಗಿತ್ತು. ಎರಡು ಬಾರಿ ಇದರ ಬಗ್ಗೆ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಲಾಗಿತ್ತು. ಆಂಧ್ರಪ್ರದೇಶದವರು ಒಮ್ಮೆ ಮಹಾರಾಷ್ಟ್ರದವರು ಮತ್ತೊಮ್ಮೆ ಸಭೆಯನ್ನು ಮುಂದಕ್ಕೆ ಹಾಕಿಸಿದರು ಎನ್ನುವ ಮಾಹಿತಿಯಿದೆ” ಎಂದು ಹೇಳಿದರು.

“ಈ ಬಗ್ಗೆ ಮತ್ತೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದಾಗ ಅವರು ‘ಗಾಬರಿಯಾಗಬೇಡಿ, ತಾಂತ್ರಿಕ ವಿಚಾರದ ಕಾರಣಕ್ಕೆ ಸಭೆ ಮುಂದಕ್ಕೆ ಹಾಕಲಾಯಿತು. ಮತ್ತೊಮ್ಮೆ ಸಭೆ ಕರೆಯುವುದಾಗಿ’ ಆಶ್ವಾಸನೆ ನೀಡಿದ್ದಾರೆ. ಅಣೆಕಟ್ಟು ಎತ್ತರ ಹೆಚ್ಚಳ ಕುರಿತಂತೆ ಯಾವುದೇ ತಕರಾರುಗಳು ಇಲ್ಲವೆಂದು ಮಹಾರಾಷ್ಟ್ರದವರು ಈ ಹಿಂದೆ ತಿಳಿಸಿದ್ದರು ಎಂದು ಎಂ.ಬಿ.ಪಾಟೀಲರು ಹೇಳಿದ್ದಾರೆ” ಎಂದರು.

“ರೈತರ ಭೂಮಿ ಸ್ವಾಧೀನಕ್ಕೆ ಒಳಪಡಿಸಿಕೊಳ್ಳುವ ಬಗ್ಗೆ ಅನೇಕ ಸಭೆಗಳನ್ನು ನಡೆಸಲಾಗಿದೆ. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಇಂತಿಷ್ಟು ಪರಿಹಾರವೆಂದು ನಿಗದಿ ಮಾಡಲಾಗಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದು ಅನೇಕ ಜನಪ್ರತಿನಿಧಿಗಳು ಒತ್ತಡ ಹಾಕಿ ಇದನ್ನು ನಿಲ್ಲಿಸಿದರು. ಇತ್ತೀಚೆಗೆ ಆಲಮಟ್ಟಿ ಭಾಗದ ಜನಪ್ರತಿನಿಧಿಗಳ, ಸಚಿವರ, ರೈತರ ಸಭೆ ನಡೆಸಿ ಅದರ ತೀರ್ಮಾನವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ” ಎಂದರು.

“ಪರಿಹಾರದ ವಿಚಾರವಾಗಿ ಸುಮಾರು 20 ಸಾವಿರ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅನೇಕ ವಕೀಲರು ರೈತರನ್ನ ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾರಿಗೂ ಸಹ ಅನುಕೂಲವಾಗುವುದಿಲ್ಲ ಎನ್ನುವುದನ್ನು ರೈತರು ಅರಿಯಬೇಕು” ಎಂದರು.

“ಅಣೆಕಟ್ಟು ಎತ್ತರ ಹೆಚ್ಚಳ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿ ನಮ್ಮ ಸರ್ಕಾರ ಬದ್ಧತೆ ಮೆರೆದಿದೆ. ಈ ವರ್ಷ 100 ಟಿಎಂಸಿಗೂ ಹೆಚ್ಚು ನೀರು, ಕೆಲವೊಮ್ಮೆ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದ ಉದಾಹರಣೆಯಿದೆ. ವರುಣನ ಕೃಪೆಯಿಂದ ಆಲಮಟ್ಟಿ ಅಣೆಕಟ್ಟು ತುಂಬಿ ಎಲ್ಲರಿಗೂ ಸಂತಸ ಉಂಟು ಮಾಡಿದೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *