ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಏಳೂವರೆ ವರ್ಷ ನಾನು ಮುಖ್ಯಮಂತ್ರಿಯಾಗಿ ಈ ಅವಧಿಯಲ್ಲಿ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೆಲಸ ಮಾಡಿದ್ದೇನೆ. ಅಧಿಕಾರಿಗಳೂ ಸಂವಿಧಾನಬದ್ದವಾಗಿ ಜಾತ್ಯತೀತರಾಗಿರಬೇಕು. ಯಾವುದೇ ಪಕ್ಷದ ಪರವಾಗಿ, ಜಾತಿ-ಧರ್ಮದ ಪರವಾಗಿ ವರ್ತಿಸದೇ ವೃತ್ತಿಪರವಾಗಿ ಇರಬೇಕು. ಅಸಮಾನತೆ ಹೋಗಲಾಡಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ನಿಸ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸತತ ಹತ್ತು ಗಂಟೆ ಕೆಡಿಪಿ ಸಭೆ ನಡೆಸಿದ ಮುಖ್ಯಮಂತ್ರಿ ಬೆಳಗ್ಗೆ 11:30ರಿಂದ ರಾತ್ರಿ 9:30 ವರೆಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಮಾಜಮುಖಿಯಾಗಿರುವುದು, ಸಂವಿಧಾನದ ಆಶಯಗಳನ್ನು ಈಡೇರಿಸುವುದು ನಮ್ಮ-ನಿಮ್ಮ ಗುರಿ. ಅಸಮಾನತೆ ತೊಲಗದೆ ಸಮ ಸಮಾಜದ ಸೃಷ್ಟಿ ಸಾಧ್ಯವಿಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಬಹಳ ಮಂದಿಗೆ ಅಧಿಕಾರ ಕೇಂದ್ರಗಳು ಅರ್ಥ ಆಗುವುದಿಲ್ಲ. ಗ್ರಾಈಣ ಭಾಗದಲ್ಲಿ ಬದುಕು ಕಳೆದುಕೊಂಡವರು ಜೀವನಕ್ಕಾಗಿ ನಗರಕ್ಕೆ ಬರುತ್ತಾರೆ. ನಮ್ಮಲ್ಲಿರುವ ಶೇ90 ಕ್ಕಿಂತ ಹೆಚ್ಚು ಅಧಿಕಾರಿಗಳು ಗ್ರಾಮೀಣ ಭಾಗದಿಂದ ಬಂದವರು. ಗ್ರಾಮೀಣ ಪ್ರದೇಶ ಪ್ರಗತಿ ಆಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಗ್ರಾಮೀಣ ಭಾಗದಿಂದ ಬಂದ ಅಧಿಕಾರಿ ಮತ್ತು ಸಿಬ್ಬಂದಿ ಸ್ಪಂದಿಸದಿದ್ದರೆ ಜನೋದ್ಧಾರ ಸಾಧ್ಯವಿಲ್ಲ. ಆದ್ದರಿಂದ ಅಮಾಯಕ ಜನರನ್ನು ಅಲೆದಾಡಿಸಬೇಡಿ. ಜನರ ಸಮಸ್ಯೆ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಅಧಿಕಾರಿಗಳು ಕಚೇರಿಯಲ್ಲೇ ಕೂರದೇ ಸ್ಥಳ ಸಮೀಕ್ಷೆ ಮಾಡಬೇಕು. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋದಾಗ ಅಪರಾಧ ಪತ್ತೆ ಹೆಚ್ಚು ಪರಿಣಾಮಕಾರಿಯಾಗಿ ಆಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವುದೇ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಮತ್ತು ಒಬ್ಬರು ಜಿಲ್ಲಾ ರಕ್ಷಣಾಧಿಕಾರಿಯನ್ನು ಬದಲಾಯಿಸಿದ ಮೇಲೆ ಜಿಲ್ಲೆಯ ಪರಿಸ್ಥಿತಿ ಸುಧಾರಿಸಿತು. ಹೊಸದಾಗಿ ಬಂದ ಇಬ್ಬರು ಅಧಿಕಾರಿಗಳಿಗೆ ಸಾಧ್ಯವಾಗಿದ್ದು ಉಳಿದ ಅಧಿಕಾರಿಗಳಿಂದಲೂ ಸಾಧ್ಯವಿದೆ. ಇದಕ್ಕೆ ಅಧಿಕಾರಿಗಳು ವೃತ್ತಿಪರವಾಗಿ, ಸಂವಿಧಾನಬದ್ದವಾಗಿ ಇದ್ದರೆ ಸಾಕು ಎಂದರು.
ಪೊಲೀಸ್ ಇಲಾಖೆಗೆ ಎಚ್ವರಿಕೆ
ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಿರುವುದು ಅತ್ಯಂತ ಗಂಭೀರವಾದ ಸಂಗತಿ. ಈ ಬಗ್ಗೆ ಗಮನ ಹರಿಸಿ ಶಿಕ್ಷೆ ಪ್ರಮಾಣ ಹೆಚ್ಚಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆಗಳ್ಳತನ ಪ್ರಕರಣ ತಡೆಯಲು ಬೀಟ್ ಪೊಲೀಸಿಂಗ್ ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಬೆಳೆಯುತ್ತಿರವ ನಗರದಲ್ಲಿ ಕಸದ ಪ್ರಮಾಣವೂ ಹೆಚ್ಚುತ್ತಿದ್ದು ಇವುಗಳ ವೈಜ್ಞಾನಿಕ ವಿಲೇವಾರಿಗೆ ಮತ್ತು ಎಲ್ಲೆಂದರಲ್ಲಿ ಕಸ ಎಸೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚಿಸಿದರು.


