ಹಿರಿಯೂರು ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಹಲವು ಮಂದಿ ಸಜೀವ ದಹನಗೊಂಡ ಭಯಾನಕ ಘಟನೆಯ ಬಳಿಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಅವಧಿಯ ಸಂಚಾರದ ಸುರಕ್ಷತೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿರು ವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭೀಕರ ರಸ್ತೆ ದುರಂತಗಳು ಮಧ್ಯರಾತ್ರಿಯ ನಂತರವೇ ನಡೆಯುತ್ತಿವೆ. ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ ಚಾಲನೆ ಮಾಡುವುದೇ ಅಪಘಾತಗಳಿಗೆ ಮುಖ್ಯ ಕಾರಣವಾಗಿರುತ್ತದೆ. ಚಾಲಕರು ನಿದ್ದೆ ಬರುವಾಗ ಬಲವಂತವಾಗಿ ವಾಹನ ಚಾಲನೆ ಮಾಡುವುದರಿಂದ ಅನಾಹುತಗಳು ಸಂಭವಿಸುವುದನ್ನು ತಡೆಯಲು ರಾತ್ರಿ ಕಡ್ಡಾಯ ವಿಶ್ರಾಂತಿಯ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಚಾಲಕರು ವಾಹನಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುವಂತೆ ಹೊಸ ಮಾರ್ಗಸೂಚಿ ರೂಪಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ವಿಶ್ರಾಂತಿ ತಾಣಗಳಲ್ಲಿ ಚಾಲಕರು ಕನಿಷ್ಠ ನಾಲ್ಕು ಗಂಟೆ ನಿದ್ದೆ ಮಾಡಲು ಅವಕಾಶ ಕಲ್ಪಿಸಬೇಕು. ಬಸ್ಗಳಲ್ಲಿ ಸಾಮಾನ್ಯವಾಗಿ ಇಬ್ಬರು ಚಾಲಕರಿರುತ್ತಾರೆ, ಟ್ರಕ್ ಮತ್ತು ಲಾರಿಗಳಲ್ಲಿ ಒಬ್ಬರೇ ಚಾಲಕರಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪಘಾತದ ಅಪಾಯ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ.
ಹಿರಿಯೂರಿನಲ್ಲಿ ಅಪಘಾತ ನಡೆದ ಸ್ಥಳವು ‘ಬ್ಲ್ಯಾಕ್ ಸ್ಪಾಟ್’ ಆಗಿ ಪರಿಣಮಿಸಿದ್ದು, ಅಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ರಸ್ತೆಯ ವಿನ್ಯಾಸದಲ್ಲಿ ದೋಷವೇ ಅಥವಾ ಸುರಕ್ಷತಾ ಕ್ರಮಗಳ ಲೋಪವೇ ಎಂಬುದನ್ನು ಪರಿಶೀಲಿಸಲು ಸಚಿವರು ಸೂಚಿಸಿದ್ದಾರೆ.
ರಾತ್ರಿ ಪ್ರಯಾಣ ಮಾಡುವವರು ಸಂಜೆಯೇ ಸರಿಯಾಗಿ ನಿದ್ರೆ ಮಾಡಿ ನಂತರ ಪ್ರಯಾಣ ಆರಂಭಿಸುವುದು ಉತ್ತಮ. ಚಾಲನೆ ಮಾಡುವಾಗ ನಿದ್ದೆ ಬಂದರೆ ವಾಹನವನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ ಮುಖ ತೊಳೆದು ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮುಂದೆ ಸಾಗಬೇಕು ಎಂದು ಸಚಿವ ರಾಮಲಿಂಗರೆಡ್ಡಿ ಮನವಿ ಮಾಡಿದ್ದಾರೆ.


