ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ರಾತ್ರಿ ಭೇಟಿಯ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ತನಿಖೆಗೆ ಆದೇಶ ನೀಡಿದೆ.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಈ ಕುರಿತು ಎನ್ಎಚ್ಆರ್ಸಿಗೆ ನೀಡಿದ ದೂರು ಪರಿಗಣಿಸಿ ಆಯೋಗದ ತನಿಖಾ ವಿಭಾಗದ ಡಿಜಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ರಾತ್ರಿ 11 ಗಂಟೆಯ ನಂತರ ಎಫ್ಐಆರ್, ತನಿಖೆ ಅಥವಾ ವಾರೆಂಟ್ ಇಲ್ಲದೆ ಪೊಲೀಸರು ಕೆಲವು ಸಂಘಟನೆಗಳಿಗೆ ಸೇರಿದ ಜನರ ಮನೆಗಳಿಗೆ ಭೇಟಿ ನೀಡಿ, ಛಾಯಾಚಿತ್ರ, ಜಿಪಿಎಸ್ ಮಾಹಿತಿ ಸಂಗ್ರಹಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ದಕ್ಷಿಣ ಕನ್ನಡ ಎಸ್.ಪಿ ವಿರುದ್ಧವೂ ದೂರು ಸಲ್ಲಿಸಿದ್ದರು.ಆಯೋಗವು ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಸ್ಪಷ್ಟ ಸೂಚನೆ ನೀಡಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ (ಪಿಸಿಎ) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು. ಪೊಲೀಸರಿಂದ ತೊಂದರೆಗೊಳಗಾಗಿರುವವರು ಅಪರಾಧ ಹಿನ್ನೆಲೆ ಇಲ್ಲದವರಾಗಿದ್ದು, ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ. ಈ ಕಾನೂನು ವಿರೋಧಿ ಕ್ರಿಯೆಗಳ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಪಕ್ಷಪಾತವಿಲ್ಲದ ತನಿಖೆ ನಡೆಯಬೇಕು ಎಂದು ಸಚಿವೆ ಆಗ್ರಹಿಸಿದ್ದರು.