ಗಾಳಿ ಸಹಿತ ಭಾರಿ ಮಳೆಯಾಗುತ್ತಿರುವ ದಕ್ಷಿಣಕನ್ನಡಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಆಗಮಿಸಿದ್ದು, 25 ಸಿಬ್ಬಂದಿಯ ಎನ್ ಡಿ ಆರ್ ಎಫ್ ತಂಡ ಪುತ್ತೂರು ತಲುಪಿದೆ.
ಭಾರೀ ಗಾಳಿ ಮಳೆ ಹಿನ್ನಲೆಯಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸರ್ವ ಸನ್ನದ್ಧ ಆಗಿರಲು ಸೂಚನೆ ನೀಡಲಾಗಿದೆ. ಕಳೆದ 48 ಗಂಟೆಗಳಿಂದ ನಿರಂತರ ಸುರಿಯುತ್ತಿರುವ ಮಳೆ ಹಾಗೂ ಸಮುದ್ರ ಪ್ರಕ್ಷುಬ್ದವಾದ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆ ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಅಪಾಯದಲ್ಲಿರುವ ಗುಡ್ಡ ಭಾಗದ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡುವ ಜೊತೆಗೆ ಈಗಾಗಲೇ ಸಮುದ್ರಕ್ಕೆ ತೆರಳಿರುವ ಬೋಟ್ ಗಳನ್ನು ತಕ್ಷಣ ದಡಕ್ಕೆ ಬರಲು ತಿಳಿಸಲಾಗಿದೆ.
ನವಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಬೋಟ್ ಲಂಗರು ಹಾಕುವುದಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಐದು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ ಮಂಗಳೂರುಗಳಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.