Menu

ಇಡಿ ರಾಜಕೀಯ ದುರ್ಬಳಕೆಗೆ ನನ್ನ ಪ್ರಕರಣವೇ ಸಾಕ್ಷಿ:  ಡಿಕೆ ಶಿವಕುಮಾರ್

ಇಡಿ ಸಂಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಪ್ರಕರಣವೇ ಸಾಕ್ಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕನಕಪುರದ ಕೋಡಿಹಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಮುಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಡಿಗೆ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಕೇಳಿದಾಗ, “ನನ್ನ ಪ್ರಕರಣವನ್ನೇ ತೆಗೆದುಕೊಳ್ಳಿ. ನನ್ನ ಮೇಲೆ ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ನಂತರ ಆ ಕೇಸ್ ರದ್ದಾಯಿತು. ರಾಜಕೀಯ ಒತ್ತಡಕ್ಕೆ ಸಿಲುಕುವ ಬಗ್ಗೆ ಇಡಿ ಪರಿಶೀಲನೆ ನಡೆಸಬೇಕು. ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಇರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಈ ರೀತಿ ಹೇಳಿರಬೇಕು” ಎಂದರು.

ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಎಂದು ಕೇಳಿದಾಗ, “ಈ ಕಾರಣಕ್ಕೆ ಈ ರೀತಿ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಬಿಜೆಪಿ ನಾಯಕರ ಮೇಲೆ ಮಾತ್ರ ಇಡಿ ಕೇಸ್ ದಾಖಲಾಗುತ್ತಿಲ್ಲ ಯಾಕೆ? ಕೇವಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಯಾಕೆ ಕೇಸ್ ಹಾಕಲಾಗುತ್ತಿದೆ. ಬಿಜೆಪಿಗೆ ಹೋದವರೆಲ್ಲಾ ಶುದ್ಧರೇ? ಇದೇ ಅಲ್ಲವೇ ಬಿಜೆಪಿ ವಾಷಿಂಗ್ ಮಷಿನ್” ಎಂದು ಹೇಳಿದರು.

ಟನಲ್ ಕಾರಿಡಾರ್ ಅಗತ್ಯವಿದೆಯೇ ಎಂಬ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಕೇಳಿದಾಗ, “ಪಾಪ ಸಣ್ಣ ಹುಡುಗ, ಅವರ ಪಕ್ಷದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರಲ್ಲಾ ಅವರ ಮೂಲಕ ಸದನದಲ್ಲಿ ಚರ್ಚೆ ಮಾಡಿಸಲಿ” ಎಂದು ತಿರುಗೇಟು ನೀಡಿದರು.

ಬಿಡದಿ ಟೌನ್ ಶಿಪ್ ಗೆ ಕೆಲವು ಪಂಚಾಯ್ತಿ ರೈತರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಈ ಯೋಜನೆ ನಾನು ಮಾಡಿದ್ದಲ್ಲ. ಕುಮಾರಸ್ವಾಮಿ ಅವರು ಮಾಡಿರುವುದು. ಅದನ್ನು ನಾನು ಡಿನೋಟಿಫಿಕೇಷನ್ ಮಾಡಲು ಬರಲ್ಲ. ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಅವತ್ತಿನಿಂದ ಹೋರಾಟ ಮಾಡದೇ, ನಾನು ಬಂದಾಗ ಮಾತ್ರ ಯಾಕೆ ಹೋರಾಟ ಮಾಡಬೇಕು? 9 ಸಾವಿರ ಎಕರೆ ಪೈಕಿ 1 ಸಾವಿರಕ್ಕೂ ಹೆಚ್ಚು ಜಮೀನು ಈಗಾಗಲೇ ಕೆಐಎಡಿಬಿಗೆ ನೀಡಲಾಗಿದೆ. ಅದಕ್ಕೆ ಪರಿಹಾರವನ್ನು ಪಡೆಯಲಾಗಿದೆ. ಆಗ ಹೋರಾಟ ಮಾಡದೆ ಈಗ ಯಾಕೆ? ಇದರಲ್ಲೂ 75% ಜನ ತಮಗೆ ಏನು ಪರಿಹಾರ ಬೇಕು ಎಂದು ಕೇಳಿದ್ದಾರೆ” ಎಂದು ತಿಳಿಸಿದರು.

ರೈತರನ್ನು ಕರೆದು ಚರ್ಚೆ ಮಾಡುತ್ತಿಲ್ಲ ಎಂದು ಕೇಳಿದಾಗ, “ರೈತರ ಜೊತೆ ಚರ್ಚೆ ಮಾಡುತ್ತೇನೆ. ಅವರನ್ನು ಕರೆಯುವುದಿಲ್ಲ. ನಾನೇ ಅವರ ಬಳಿ ಹೋಗಿ ಚರ್ಚೆ ಮಾಡುವೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರು ಕೂಡ ನಮ್ಮ ರೈತರೆ” ಎಂದು ತಿಳಿಸಿದರು.

ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಮಸ್ಯೆ ಏನು ಇಲ್ಲ. ನಮ್ಮ ಕಾರ್ಯಕರ್ತರು, ಸ್ಥಳೀಯ ನಾಯಕರು ಇಲ್ಲಿ ಜನರ ಸಂಪರ್ಕ ಸಾಧಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂದು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ನೀಡುತ್ತೇವೆ. ಕೆಲವು ಅರ್ಜಿಗಳು ಪಿಂಚಣಿ, ಇ-ಖಾತಾ, ಜಿಎಸ್ ಟಿ ವಿಚಾರವಾಗಿ ಬಂದಿವೆ” ಎಂದರು.

Related Posts

Leave a Reply

Your email address will not be published. Required fields are marked *