ಮದುವೆಯಾಗಿ ಮೂರು ಮಕ್ಕಳಿರುವ ಮಹಿಳೆಗೆ ಲವ್ ಮಾಡು ಎಂದು ಪೀಡಿಸುತ್ತಿದ್ದಾತ ಆಕೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಮಹಿಳೆ.
ಆಟೋಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಹಫೀಸ್, ಮನೆಗೆಲಸ ಮಾಡುತ್ತಿದ್ದ ಫೀರ್ದೋಸ್ ಬಾನು ಹಿಂದೆ ಬಿದ್ದಿದ್ದ. ತನ್ನನ್ನು ಲವ್ ಮಾಡುವಂತೆ ಕಾಟ ಕೊಡುತ್ತಿದ್ದ. ಹಫೀಸ್ ಕಾಟ ತಾಳಲಾರದೆ ಫಿರ್ದೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆತನ ಕುಟುಂಬದವರನ್ನು ಪೊಲೀಸರು ಕರೆಸಿದ್ದರು. ಇನ್ನು ಮುಂದೆ ಆಕೆಯನ್ನು ಕಾಡದಂತೆ ನೋಡುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದರು. ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ಆತನನ್ನು ವಾಪಸ್ ಕಳಿಸಿದ್ದರು.
ಕೆಲವು ದಿನ ಸುಮ್ಮನಿದ್ದು ಆತ ಮತ್ತೆ ಆಕೆಯ ಹಿಂದೆ ಬಿದ್ದಿದ್ದ. ಆದರೆ ಆಕೆ ಹಫೀಸ್ನನ್ನು ನಿರ್ಲಕ್ಷಿಸಿದ್ದಾರೆ. ಮಧ್ಯಾಹ್ನ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಹಫೀಸ್, ಜಗಳ ತೆಗೆದು ಫಿರ್ದೋಸ್ ಬಾನುಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಚಂದ್ರಾಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಧಾರವಾಡದಲ್ಲಿ ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಹತ್ಯೆ
ಆಸ್ತಿ ವಿಚಾರಕ್ಕೆ ಅಣ್ಣ ತಂಗಿಯ ಬರ್ಬರ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ಶಿವಕ್ಕ(45) ಕೊಲೆಯಾದವರು. ಹನುಮಂತ ಯಲಿವಾಳ ಕೊಲೆ ಆರೋಪಿ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ, ಆಸ್ತಿ ಬೇಕು ಎಂದು ಶಿವಕ್ಕ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಅಣ್ಣ ತಂಗಿ ಮಧ್ಯೆ ಗಲಾಟೆ ನಡೆದಿದೆ. ಯುಗಾದಿ ಹಬ್ಬದಂದು ಭೂಮಿ ಪೂಜೆಗೆ ಹೋದಾಗ ಕೊಲೆ ಮಾಡಲಾಗಿದೆ.


