ಮುಂಬೈ (ಮಹಾರಾಷ್ಟ್ರ): ದೆಹಲಿಯಲ್ಲಿ ರಾಜಕೀಯ ಭೂಕಂಪನ ಸಂಭವಿಸಲಿದ್ದು, 2025ರ ಡಿಸೆಂಬರ್ 19ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್, ಕೇಂದ್ರದಲ್ಲಿ ಆಡಳಿತ ಬದಲಾವಣೆ ಆಗಲಿದೆ ಎಂಬ ಹೇಳಿರುವ ಬೆನ್ನಲ್ಲೇ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಕೂಡ ಅಂಥದ್ದೇ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಪತನದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್ 19ರಂದು ದೆಹಲಿ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಗುಸುಗುಸು ಸುದ್ದಿ ಇದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಈ ರಾಜಕೀಯ ಬದಲಾವಣೆಯಲ್ಲಿ ಅಮೆರಿಕ ಸರ್ಕಾರದ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಸೇನಾ (ಯುಬಿಟಿ) ವಕ್ತಾರ, ರಾಜಕೀಯ ಭೂಕಂಪನದ ಕೇಂದ್ರ ಅಮೆರಿಕದಲ್ಲಿದೆ. ಕೆಲವು ದಿನದ ಹಿಂದೆ ಪೃಥ್ವಿರಾಜ್ ಚೌಹಾಣ್ ಹೇಳಿದಂತೆ, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಬಿಜೆಪಿ ತನ್ನೆಲ್ಲ ನಾಯಕರನ್ನು ದೆಹಲಿಯಲ್ಲಿಯೇ ಇರಲು ಕೇಳಿಕೊಂಡಿದೆ. ಎಲ್ಲ ಬಿಜೆಪಿ ನಾಯಕರು ದೆಹಲಿಯಲ್ಲೇ ಇರಬೇಕೆಂದು ಮತ್ತು ನಗರ ತೊರೆಯದಂತೆ ಕೇಳಿಕೊಳ್ಳಲಾಗಿದೆ. ಹಾಗಾಗಿ, ಸ್ಪಷ್ಟವಾಗಿ ಏನೋ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌಹಾಣ್ ಕೂಡಾ ಅಕ್ಟೋಬರ್ 19ರಂದು ದೇಶದ ರಾಜಕೀಯದಲ್ಲಿ ದೊಡ್ಡ ಭೂಕಂಪನವಾಗಲಿದೆ. ದೇಶದ ಪ್ರಧಾನಿ ಬದಲಾಗಲಿದ್ದಾರೆ. ಮರಾಠಿ ವ್ಯಕ್ತಿ ದೇಶದ ಪ್ರಧಾನಿಯಾಗಲಿದ್ದಾರೆ. ಆ ವ್ಯಕ್ತಿ ಬಿಜೆಪಿಗ ಎಂದಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲೂ ಕೂಡ ಇದೇ ರೀತಿಯ ಊಹಾಪೋಹ ಹರಿದಾಡಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆಸರು ಚರ್ಚೆಗೆ ಬಂದಿತು. ಗಡ್ಕರಿ ಆರ್ಎಸ್ಎಸ್ ಬೆಂಬಲ ಹೊಂದಿದ್ದು, ಮೋದಿ ಆಪ್ತವಲಯದಲ್ಲಿದ್ದಾರೆ. ಈ ಸುದ್ದಿಗಳ ನಡುವೆ ಬಿಜೆಪಿ ಐದು ಬಾರಿ ಶಾಸಕರಾಗಿದ್ದ ಬಿಹಾರದ ನಿತಿನ್ ನಬಿನ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ನಡುವೆ ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೀಟು ಹಂಚಿಕೆ ಅಂತಿಮ ಘಟ್ಟ ತಲುಪಿದ್ದು, ಇನ್ನೊಂದೆರಡು ದಿನಗಳಲ್ಲಿ ಈ ಕುರಿತು ಘೋಷಿಸಲಾಗುವುದು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ಥಾಣೆ, ಕಲ್ಯಾಣ್-ಡೊಂಬಿವಿಲಿ ಮತ್ತು ನವಿ ಮುಂಬೈಗೆ ಸೀಟು ಹಂಚಿಕೆ ಘೋಷಣೆಗಳನ್ನು ಮಾಡಲಾಗುವುದು ಎಂದು ರಾವತ್ ಹೇಳಿದರು.


