Menu

ಶಾಸಕರಿಗೆ ಐಪಿಎಲ್ 3 ಟಿಕೆಟ್ ಫ್ರೀ, 2 ಖರೀದಿಗೆ ಅವಕಾಶ: ಡಿಕೆ ಶಿವಕುಮಾರ್

ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಟಿಕೆಟ್ ಉಚಿತವಾಗಿ ನೀಡಲು ಒಪ್ಪಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಹೆಚ್ಚುವರಿ ಟಿಕೆಟ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಕೆಎಸ್ ಸಿಎ ಪದಾಧಿಕಾರಿಗಳು, ಆರ್ ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳ ಜತೆಗಿನ ಸಭೆ ಬಗ್ಗೆ ಕೇಳಿದಾಗ, ಶಾಸಕರಿಗೆ ಕ್ರಿಕೆಟ್ ಪಂದ್ಯಗಳ ಟಿಕೆಟ್ ವಿತರಣೆ ಕುರಿತು ಇಂದು ನಾನು ಕೆಎಸ್ ಸಿಎ ಅಧ್ಯಕ್ಷರು ಪದಾಧಿಕಾರಿಗಳು, ಡಿಎನ್ಎ ಸಂಸ್ಥೆ ಹಾಗೂ ಆರ್ ಸಿಬಿ ವ್ಯವಸ್ಥಾಪಕರೊಂದಿಗೆ ಚರ್ಚೆ ಮಾಡಿದೆ. ಕಳೆದ ವಾರ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗಿದ್ದ ಹಿನ್ನೆಲೆಯಲ್ಲಿ 2 ಟಿಕೆಟ್ ನೀಡಲು ಒಪ್ಪಿದ್ದರು. ಇಂದು ಮತ್ತೆ ಸಭೆ ಮಾಡಿದ್ದೇವೆ. ಕ್ರಿಕೆಟ್ ಸಂಸ್ಥೆಯವರು ಅನೇಕ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರೊಂದಿಗೆ ಈ ವಿಚಾರ ಇಲ್ಲಿಗೆ ಅಂತ್ಯಗೊಳಿಸಲಾಗುತ್ತಿದೆ. ಯಾರಿಗಾದರೂ ಐಪಿಎಲ್ ಟಿಕೆಟ್ ಬಗ್ಗೆ ಆಸಕ್ತಿ ಇಲ್ಲವಾದರೆ, ಅವರು ಈ ಬಗ್ಗೆ ನಮಗೆ ಲಿಖಿತ ರೂಪದಲ್ಲಿ ನೀಡಲಿ, ನಾವು ಅವರಿಗೆ ಟಿಕೆಟ್ ನೀಡುವುದಿಲ್ಲ. ಇಲ್ಲಿ ಯಾರಿಗೂ ಬಲವಂತವಿಲ್ಲ ಎಂದರು.

ಶಾಸಕರು ಹೆಚ್ಚಿನ ಟಿಕೆಟ್ ಗಳಿಗೆ ಬೇಡಿಕೆ ಇಟ್ಟಿದ್ದ ಬಗ್ಗೆ ಕೇಳಿದಾಗ, ಅನೇಕ ಬೇಡಿಕೆಗಳು ಬರುತ್ತವೆ. ಎಲ್ಲವನ್ನು ಈಡೇರಿಸಲು ಆಗುವುದಿಲ್ಲ. ಅವರ ಬೇಡಿಕೆಗಳ ಆಧಾರದ ಮೇಲೆ ಚರ್ಚೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಈ ತೀರ್ಮಾನ ಮಾಡಲಾಗಿದೆ. ನಾನು ರಾಜಸ್ಥಾನ, ಮುಂಬೈ, ದೆಹಲಿ, ಕೊಲ್ಕತ್ತಾ ಹಾಗೂ ಗುಜರಾತ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಿದ್ದು, ಸುಮಾರು 50-60% ಟಿಕೆಟ್ ಗಳನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವರ್ಗದವರಿಗೆ ವಿತರಣೆ ಮಾಡಲಾಗುತ್ತಿದೆ. ಅವರಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಸ್ತಕ್ಷೇಪ ಕಡಿಮೆ ಇದೆ ಎಂದು ಹೇಳಿದರು.

ಕ್ರೀಡಾಂಗಣದ  ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಯಾವ ರೀತಿ ಆಸನಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮಾತನಾಡಿದ್ದೇವೆ. ಬೇರೆ ಕಡೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲು ಜಿಬಿಎ ಆಯುಕ್ತರ ಜತೆ ಚರ್ಚೆ ಮಾಡಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇವೆ. ಅವರು ಪ್ರಸ್ತಾವನೆ ಸಲ್ಲಿಸಿದ ಬಳಿಕ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಅಗತ್ಯ ಅನುಮತಿ ನೀಡಲಾಗುವುದು. 20 ಸಾವಿರ ಆಸನಗಳ ಸಂಖ್ಯೆ ಹೆಚ್ಚಳ ಮಾಡಿದರೆ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಐಪಿಎಲ್ ಪಂದ್ಯಾವಳಿಯಲ್ಲಿ ಶಾಸಕರು ಹಾಗೂ ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ “ನಾನು ಆ ವಿಚಾರಕ್ಕೆಲ್ಲಾ ಹೋಗುವುದಿಲ್ಲ. ಇದನ್ನು ಕೆಎಸ್ ಸಿಎ ಪದಾಧಿಕಾರಿಗಳಿಗೆ ಬಿಟ್ಟ ವಿಚಾರ. ಅವರ ವ್ಯವಹಾರಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುವುದಿಲ್ಲ. ನಾವು ಶಾಸಕರು, ಸಂಸದರಾಗಿರಬಹುದು. ಶಾಸಕರಿಂದ ಟಿಕೆಟ್ ಮನವಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಉಳಿದಂತೆ ಬೇರೆ ವಿಚಾರದಲ್ಲಿ ನಾನು ಹೋಗುವುದಿಲ್ಲ ಎಂದು  ಉತ್ತರಿಸಿದರು.

ಈಗಾಗಲೇ ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದು, ಕೆಎಸ್ ಸಿಎಗೂ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡಲಾಗುವುದೇ ಎಂದು ಕೇಳಿದಾಗ, ನಾವು ಈಗಾಗಲೇ ಕೆಎಸ್ ಸಿಎ ಅವರಿಗೆ 25 ಎಕರೆ ಜಾಗ ನೀಡಿದ್ದೇವೆ, ತುಮಕೂರು, ಮೈಸೂರಿನಲ್ಲಿ ಜಾಗ ನೀಡಿದ್ದೇವೆ. ಬೆಂಗಳೂರಿನಲ್ಲಿ ಕೆಹೆಚ್ ಬಿ ವತಿಯಿಂದಲೂ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸೂರ್ಯನಗರದಲ್ಲಿ ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ಅನುಕೂಲವಾಗಲಿ ಎಂದು ಎಲ್ಲಾ ಕ್ರೀಡೆಗಳಿಗೆ ಪ್ರಯೋಜನವಾಗುವಂತೆ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ಹೋಗಲೇಬಕಲ್ಲವೇ, ಇಂದೇ ಹೋಗಬೇಕಿತ್ತು. ಮುಖ್ಯಮಂತ್ರಿಗಳು ಬಾಗಲಕೋಟೆಗೆ ತೆರಳಿದ್ದಾರೆ. ನಾನು ಹಾಗೂ ಸುರ್ಜೇವಾಲ ಅವರು ನಾಳೆ ದಾವಣಗೆರೆ ಹೋಗುತ್ತಿದ್ದು, ಕೆಲವು ಸಭೆಗಳಿವೆ. ನಾಡಿದ್ದು ಬಾಗಲಕೋಟೆಗೆ ತೆರಳಲಿದ್ದೇನೆ. ನಂತರ ಎರಡೂ ಕ್ಷೇತ್ರಗಳಿಗೆ ಮತ್ತೊಂದು ಸುತ್ತು ತೆರಳಿ ಪ್ರಚಾರ ಮಾಡುತ್ತೇನೆ. ಏ.5-6ರಂದು ಕೇರಳ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಈಸ್ಟರ್ ಹಾಗೂ ಗುಡ್ ಫ್ರೈಡೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸವನ್ನು 5ಕ್ಕೆ ಮುಂದೂಡಲಾಗಿದೆ” ಎಂದು ತಿಳಿಸಿದರು.

ಗ್ಯಾಸ್ ಅಭಾವ ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ, “ಮಂಗಳವಾರ ಬೆಳಗ್ಗೆ 9.30ಕ್ಕೆ ನಾನು ಹಾಗೂ ಸುರ್ಜೇವಾಲ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡುತ್ತೇವೆ” ಎಂದರು.

ಅಸ್ಸಾಂ ಚುನಾವಣೆ ಗೆಲ್ಲುವ ವಿಶ್ವಾಸ ಇದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ, ಅಮಿತ್ ಶಾ ಅವರು ಮರನೇ ಎರಡರಷ್ಟು ಬಹುಮತ ಪಡೆಯುವುದಾಗಿ ಹೇಳುತ್ತಿದ್ದಾರೆ. ನಾನು ಹೇಳುತ್ತಿದ್ದೇನೆ ನಾವು ಮೂರನೇ ಎರಡರಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಅವರು ಮೂರನೇ ಒಂದರಷ್ಟು ಕ್ಷೇತ್ರ ಗೆಲ್ಲುತ್ತಾರೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *