ಶಾಸಕರಾದ ಬಿ.ಆರ್. ಪಾಟೀಲ್ ಅವರು ಹಿರಿಯರು. ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿ.ಆರ್.ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹಿರಿಯರು ಏನಾದರೂ ಸಮಸ್ಯೆ ಇದ್ದರೆ ಸೂಕ್ತವಾದ ವೇದಿಕೆಯಲ್ಲಿ ಹಿರಿಯರೊಂದಿಗೆ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರವಾಗತ್ತದೆ ಎಂದರು.
ಫೋನ್ ನಲ್ಲಿ ನಡೆದ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು. ಈಗ ಸಿಎಂ ಅವರನ್ನು ಕರೆದಿದ್ದಾರೆ ಅಲ್ಲಿ ಏನು ಚರ್ಚೆ ನಡೆಯುತ್ತದೆಯೋ ನೋಡೋಣ ಎಂದರು.
ಜಯದೇವ ಆಸ್ಪತ್ರೆಯಲ್ಲಿ ಚಿತ್ತಾಪುರ ಹಾಗೂ ಸೇಡಂ ತಾಲೂಕಿನವರೇ ತುಂಬಿಕೊಂಡಿದ್ದಾರೆ ಎಂದು ಬಿ.ಆರ್ ಪಾಟೀಲ್ ಆರೋಪಿಸಿದ್ದಾರಲ್ಲ ಎಂದು ಕೇಳಿದಾಗ ಯೋಜನೆಗಳನ್ನು ತಂದಾಗ ಆಯಾ ಶಾಸಕರ ಕ್ಷೇತ್ರದ ಜನರು ಉದ್ಯೋಗ ನಿರೀಕ್ಷಿಸುವುದು ಸಹಜ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ ಎನ್ನುವ ಮಾತನ್ನು ಅಲ್ಲಗಳೆದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ ರೂ 50,000 ಕೋಟಿ ಖರ್ಚು ಮಾಡಲಾಗಿದೆ. ಇದರಿಂದಾಗಿ ಜನರ ಆರ್ಥಿಕ ಸ್ಥಿರತೆ ಉಂಟಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದರು.
ಶಾಸಕ ರಾಜುಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಪ್ರತಿಯೊಬ್ಬ ಶಾಸಕರು ಹೆಚ್ಚಿನ ಅನುದಾನ ಕ್ಷೇತ್ರಕ್ಕೆ ನಿರೀಕ್ಷೆ ಮಾಡುತ್ತಾರೆ, ಅದರಲ್ಲಿ ತಪ್ಪೇನಿದೆ ಎಂದು ಕೇಳಿದರು. ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ವಸತಿ ಯೋಜನೆಯ ಬಗ್ಗೆ ಆರೋಪ ಕೇಳಿ ಬಂದಾಗ ವಸತಿ ಸಚಿವರ ರಾಜೀನಾಮೆ ಬಗ್ಗೆ ಮಾತನಾಡಿರಬಹುದು ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತೋರಿಸುತ್ತಿರುವ ಅಸಡ್ಡೆಯಿಂದಾಗಿ ಸಮಸ್ಯೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಪ್ರಿಯಾಂಕ್, 15 ನೆಯ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಪಾಲಿನಲ್ಲಿ ರೂ 50,000 ಕೋಟಿ ಬಂದಿಲ್ಲ. ಇದು ಹಣಕಾಸಿನ ಸಮಸ್ಯೆಗೆ ಕಾರಣವಾಗಿದೆ ಎಂದರು ಆರೋಪಿಸಿದರು.
ಜಲಜೀವನ್ ಮಿಷನ್ ಅಡಿಯಲ್ಲಿ ಅಭಿವೃದ್ದಿ ಕೈಗೊಳ್ಳಲು ಕೇಂದ್ರ ರೂ 2,700 ಕೋಟಿ ಬಿಡುಗಡೆ ಮಾಡಬೇಕಿತ್ತು, ಆದರೆ ರೂ 500 ಕೋಟಿ ಬಿಡುಗಡೆ ಮಾಡಿದೆ. ನಾವು ಕೆಲಸ ಅರ್ಧಕ್ಕೆ ನಿಲ್ಲಿಸಬಾರದು ಎಂದು ರಾಜ್ಯದಿಂದ ಅನುದಾನ ಬಿಡುಗಡೆ ಮಾಡಿ ಕೆಲಸ ಮುಂದುವರೆಸಿದ್ದೇವೆ. ಜೊತೆಗೆ ರಾಜ್ಯ ಸರ್ಕಾರದಿಂದ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ರೂ 5,000 ಕೋಟಿ ಅನುದಾನ ಬಳಸಿ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆ ಜಾರಿಗೆ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಉದ್ದೇಶಿತ ಅಮೆರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ್ದಕ್ಕೆ ರಾಜಕೀಯ ಕಾರಣವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯ ವಲ್ಲದೇ ಮತ್ತೇನು.? ಕೇಂದ್ರ ಸರ್ಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ ರೂ 15,000 ಕೋಟಿ ಬಂಡವಾಳ ನಿಂತುಹೋಗಿದ್ದು ಜೊತೆಗೆ ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈತಪ್ಪಿದೆ. ಈ ಹಿಂದೆ ತಾವು ಹಾಗೂ ಸಚಿವ ಎಂ.ಬಿ.ಪಾಟೀಲ್ ಅಮೇರಿಕಾ ಪ್ರವಾಸ ಕೈಗೊಂಡಿದ್ದರಿಂದ ರೂ 32,000 ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದವಾಗಿದ್ದು, ಸುಮಾರು ರೂ 21,000 ಕೋಟಿಗೂ ಅಧಿಕ ಬಂಡವಾಳ ಹೂಡಲಾಗಿತ್ತು ಇದರಿಂದ 18,000 ರಿಂದ 20,000 ಜನರಿಗೆ ಉದ್ಯೋಗ ದೊರಕಿತ್ತು ಎಂದು ನೆನಪಿಸಿಕೊಂಡರು.
ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ನಮ್ಮ ಯಾವ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ, ಕೇಂದ್ರದಲ್ಲಿರುವುದು ಎನ್ ಡಿ ಎ ಸರ್ಕಾರವಲ್ಲ ನೋ ಡಾಟಾ ಅವಲೇಬಲ್ ಸರ್ಕಾರ ಎಂದು ಟೀಕಿಸಿದರು. ಈಗ ಅಮೇರಿಕ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ,’ಟ್ರೇನ್ ಹೋದ ಮೇಲೆ ಟಿಕೆಟ್ ತಗೊಂಡು ಪ್ರಯೋಜನವೇನು ಎಂದು ಸೂಚ್ಯವಾಗಿ ಹೇಳಿ, ಶರತ್ ಬಚ್ಚೇಗೌಡ ಅವರು ಅಮೆರಿಕದಿಂದ ವಾಪಸ್ ಬಂದ ಮೇಲೆ ಚರ್ಚಿಸಲಾಗುವುದು ಎಂದರು.
ರಾಜ್ಯಕ್ಕೆ ಬರಬೇಕಾಗಿದ್ದ ಬಂಡವಾಳವನ್ನು ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್, ಅಸ್ಸಾಂ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸ್ಥಾಪನೆ ಮಾಡುತ್ತಿದ್ದಾರೆ. ಇಲ್ಲಿ ನಾವು ಕಷ್ಟಪಡಬೇಕು ಅಲ್ಲಿ ಸಬ್ಸಿಡಿ ಎಂದು ಬಂಡವಾಳ ಬಿಡುಗಡೆ ಮಾಡಲಾಗುತ್ತದೆ. ಅವರು ಕಷ್ಟಪಟ್ಟು ಬಂಡವಾಳ ಆಕರ್ಷಿಸಲಿ ಎಂದು ಪ್ರಿಯಾಂಕ್ ಹೇಳಿದರು.
ಬಿಜೆಪಿ ನಾಯಕರು ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆ ಒತ್ತಾಯಿಸಿದ್ದಾರೆ ಎಂದು ಪ್ರಶ್ನಿಸಿದಾಗ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಅವರದೇ ಪಕ್ಷದ ಕೆಲವರು ಒತ್ತಾಯಿಸುತ್ತಿದ್ದಾರಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದ ಸಚಿವರಿಂದ ಬಿಹಾರ ಚುನಾವಣೆಗೆ ಹಣ ಸಂಗ್ರಹಿಸಲು ಹೇಳಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆ ಗೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯದಲ್ಲಿಯೂ ಅಧಿಕಾರದಲ್ಲಿತ್ತಲ್ಲ, ಆಗ ಅವರೂ ಹೀಗೆ ಮಾಡಿದ್ದಾರ ಎಂದು ತಿರುಗೇಟು ನೀಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಇದ್ದರು.