ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ ಅಪ್ರಾಪ್ತ ವಯಸ್ಕ ಹಿಂದೂ ಜೋಡಿಯೊಂದು ರಾಜಸ್ಥಾನ ಮರುಭೂಮಿಯಲ್ಲಿ ನೀರಿನ ದಾಹ ತಾಳದೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ರಾಜಸ್ಥಾನದ ಜೈಸಲ್ಮೇರ್ನ ಸಾಧೇವಾಲಾ ಸೆಕ್ಟರ್ನಲ್ಲಿ ಗಡಿಯಿಂದ 10ರಿಂದ 12 ಕಿ.ಮೀ. ದೂರದಲ್ಲಿ ಹಿಂದು ಹುಡುಗಿ ಶಾಂತಿ (14) ಮತ್ತು ರವಿಕುಮಾರ್ (17) ಶವ ಪತ್ತೆಯಾಗಿವೆ. ಅವರ ಬಳಿ ಪಾಕ್ ಐಡಿ ಕಾರ್ಡ್ಗಳು ಸಿಕ್ಕಿವೆ.
ಈ ಜೋಡಿ ಪ್ರೇಮ ಸಂಬಂಧದಲ್ಲಿ ಇದ್ದು, ಭಾರತದಲ್ಲಿ ಉತ್ತಮ ಜೀವನ ನಡೆಸುವ ಆಸೆಯಿಂದ ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ರವಿಯ ಬೈಕ್ ಪಾಕ್ ಗಡಿಯಿಂದ ಆಚೆ 20 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಶವ ಭಾರತದ ಗಡಿಯಿಂದ ಈಚೆ 12 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಶವದ ಬಳಿ ಖಾಲಿ ನೀರಿನ ಕ್ಯಾನ್ ಸಿಕ್ಕಿದೆ. ಮರುಭೂಮಿಯಲ್ಲಿ ನಡೆದು ಬರುವಾಗ ಮೃತಪಟ್ಟಿರಬಹುದು ಎನ್ನಲಾಗಿದೆ. ಮರಣೋತ್ತರ ವರದಿ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಇವರು ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಿದ್ದರೂ ವಿಫಲವಾಗಿತ್ತು. ಹೀಗಾಗಿ ಇವರು ಅಕ್ರಮವಾಗಿ ಗಡಿ ದಾಡಿ ಬಂದಿರಬಹುದು ಎಂದು ಶಂಕಿಸಲಾಗಿದೆ.