ರಾಜಸ್ಥಾನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಚಿವ ಡಾ.ಕಿರೋಡಿ ಲಾಲ್ ಮೀನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಭಾಗಿ ಆಗಿರುವ ಸರ್ಕಾರದ ವಿರುದ್ಧವೇ ತೀವ್ರ ಅಸಮಾಧಾನ ಹೊರಹಾಕಿರುವ ಮೀನಾ ಗಂಭೀರ ಆರೋಪ ಮಾಡಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಾ. ಮೀನಾ, ನಾನು ಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೆ. ಆದರೆ ಸರ್ಕಾರ ನನ್ನನ್ನು ನಿರ್ಲಕ್ಷಿಸಿದೆ. ಹಿಂದಿನ ಆಡಳಿತದಂತೆಯೇ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮದೇ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿರುವ ಡಾ.ಕಿರೋಡಿ ಲಾಲ್ ಮೀನಾ, ಸಬ್-ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗಿನಿಂದ ತಮ್ಮ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ. ಸಿಐಡಿ ಪ್ರತಿ ಹಂತದಲ್ಲೂ ನನ್ನನ್ನು ಹಿಂಬಾಲಿಸುತ್ತಿದೆ ಮತ್ತು ನನ್ನ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಆದರೆ ಇದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ, ಡಾ. ಮೀನಾ ರಾಜಸ್ಥಾನ ವಿಧಾನಸಭೆಯಲ್ಲಿ ‘ಹೌದಪ್ಪಗಳ’ ಜಗತ್ತಿನಲ್ಲಿ ಯಾರಾದರೂ ‘ಇಲ್ಲ’ ಎಂದು ಹೇಳಲು ಧೈರ್ಯ ಮಾಡಿದರೆ, ಅವರು ನಾಶವಾಗುತ್ತಾರೆ. ನಾನು ಕುರುಡಾಗಿ ನಂಬುವುದಿಲ್ಲ, ನನಗೆ ನೋವುಂಟುಮಾಡಿದರೂ ಸತ್ಯವನ್ನು ಮಾತನಾಡುತ್ತೇನೆ ಎಂದು ಹೇಳಿದ್ದರು
ಭಜನ್ ಲಾಲ್ ಸರ್ಕಾರ ರಚನೆಯಾದಾಗಿನಿಂದ ಡಾ.ಮೀನಾ ಅವರ ಅತೃಪ್ತಿ ವ್ಯಕ್ತವಾಗುತ್ತಿದೆ. ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಬಗ್ಗೆ ಆರೋಪಿಸಿದ್ದಾರೆ. ವೈದ್ಯಕೀಯ ಇಲಾಖೆಯಂತಹ ನಿರ್ಣಾಯಕ ಖಾತೆಯನ್ನು ನೀಡದ ಕಾರಣ ಅವರ ನಿರಾಶೆ ಅವರ ಹೆಚ್ಚುತ್ತಿರುವ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಡಾ.ಕಿರೋಡಿ ಲಾಲ್ ಮೀನಾ ಅವರ ಸಹೋದರನನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿತ್ತು, ಆದರೆ ಮೀನಾ ತಮ್ಮ ಭದ್ರಕೋಟೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾಗಿ ಬಿರುಕನ್ನು ಇನ್ನಷ್ಟು ಹೆಚ್ಚಿಸಿತು ಎನ್ನಲಾಗಿದೆ.