‘ಮೆಟಾ’ದ ಸಾಮಾಜಿಕ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದ ವೇಳೆ ಲೋಪವಾಗಿ ನೈಜ ಅರ್ಥವೇ ಕಳೆದುಹೋಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಫೇಸ್ಬುಕ್ ಮಾತೃ ಸಂಸ್ಥೆ ಮೆಟಾ ಕ್ಷಮೆ ಯಾಚಿಸಿದೆ. ಅನುವಾದದಲ್ಲಿ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಮೆಟಾ ಹೇಳಿದೆ.
ಮೆಟಾ ಪ್ಲಾಟ್ಫಾರ್ಮ್ಗಳಲ್ಲಿ ಅನುವಾದ ದೋಷದ ಬಗ್ಗೆ ಸಿಎಂ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, ಕನ್ನಡದ ವಿಷಯಗಳ ದೋಷಪೂರಿತ ಅನುವಾದವು ಸತ್ಯಾಂಶಗಳನ್ನೇ ತಿರುಚುವಂತಾಗಿದೆ. ವೇದಿಕೆಯ ಬಳಕೆದಾರರನ್ನು ತಪ್ಪುಗ್ರಹಿಕೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಲಿದೆ ಎಂದು ಅಸಮಾಧಾನ ತೋಡಿಕೊಂಡಿದ್ದರು.
ಕನ್ನಡ ಅನುವಾದದಲ್ಲಿ ಆಗುತ್ತಿರುವ ಲೋಪ ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದರು. ಇತ್ತೀಚೆಗೆ ನಿಧನರಾದ ಹಿರಿಯ ನಟಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿ ಅಂತಿಮ ದರ್ಶನ ಪಡೆದ ವಿಚಾರವು ‘ಮೆಟಾ’ದಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಆದ ಸ್ವಯಂ ಅನುವಾದ ಬಹಳ ಕೆಟ್ಟದಾಗಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದರು. ಅನುವಾದದ ಸಮಸ್ಯೆಯನ್ನು ಸರಿಪಡಿಸಿರುವುದಾಗಿ ಮೆಟಾ ತಿಳಿಸಿದೆ.