ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್ ಸ್ವಾಮಿ (58) ಮೃತಪಟ್ಟಿದ್ದಾರೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದ್ದು, ಇದೇ ವ್ಯಕ್ತಿ ಎಂಟು ತಿಂಗಳ ಹಿಂದೆ ಆನೆ ದಾಳಿಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಪದೇ ಪದೆ ಹುಲಿ ದಾಳಿಗೆ ಕಾಡಂಚಿನ ಗ್ರಾಮದ ನಿವಾಸಿಗಳು ಹೈರಾಣಾಗಿದ್ದು, ಕೆಲಸಕ್ಕೆ ಹೋಗಲೂ ಹೆದರಬೇಕಾದ ಪರಿಸ್ಥಿತಿ ಇದೆ. ಹುಲಿ ದಾಳಿಯಿಂದ ಈಗಾಗಲೇ ಹಲವು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ಮೊನ್ನೆಯಷ್ಟೇ ದನ ಕಾಯುತ್ತಿದ್ದ ರೈತನ ಬಳಿಯೇ ಹುಲಿ ಬಂದಿತ್ತು. ಜಾನುವಾರುಗಳ ಮೇಲೂ ಹುಲಿ ದಾಳಿ ನಡೆಸುತ್ತಿದ್ದು ಮೇಯಲು ಹೋದ ಪ್ರಾಣಿಗಳ ಜೊತೆಗೆ ಕೊಟ್ಟಿಗೆಗೂ ನುಗ್ಗಿ ದಾಳಿ ನಡೆಸುತ್ತಿವೆ.
ನಂಜನಗೂಡು ತಾಲೂಕಿನ ಉಪ್ಪನಹಳ್ಳಿಯಲ್ಲಿ ರೈತ ಸಣ್ಣಮಾದಯ್ಯ ಎಂಬವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಮೇಕೆಯನ್ನು ಕೊಂದು ತಿಂದಿತ್ತು. ಮೈಸೂರು ಭಾಗದಲ್ಲಿ ಹುಲಿ ದಾಳಿ ಹಿನ್ನಲೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಅಶೋಕಪುರಂ ಅರಣ್ಯ ಇಲಾಖೆ ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘಟನೆ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆಯನ್ನೂ ನಡೆಸಿತ್ತು.


