ಹಾಸನ ತಾಲೂಕಿನ ಧೂಮಗೆರೆ ಗ್ರಾಮದಲ್ಲಿ ಗ್ರೀನ್ ಗ್ರಾನೈಟ್ ಗಣಿಗಾರಿಕೆ ವೇಳೆ ಬಂಡೆಯ ಮಣ್ಣು ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತ ಕಾರ್ಮಿಕ ತಮಿಳುನಾಡು ಮೂಲದ ಮಣಿ ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ಮಣಿಯನ್ನು ಬೆಂಗಳೂರಿಗೆ ಚಿಕಿತ್ಸೆಗೆ ಸಾಗಿಸುವಾಗ ದಾರಿ ಮಧ್ಯೆ ಅಸು ನೀಗಿದ್ದಾರೆ. ಹಾಸನ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಿಸರ್ಗ ಮಿನರಲ್ಸ್ ಬಂಡೆ ಮಾಲಿಕ ದೇವರಾಜ್ ಮತ್ತು ಅವರ ಪುತ್ರ ಅರ್ಜುನ್ ಎಂಬುವರಿಗೆ ಸೇರಿದ ಕ್ವಾರಿ ಇದಾಗಿದೆ. ಕಾರ್ಮಿಕನ ದುರಂತ ಸಾವಿನ ವಿಚಾರ ಬಯಲಾಗದಂತೆ ಅರ್ಜುನ್ ಮುಚ್ಚಿಟ್ಟು, ಶವವನ್ನು ಚಾಮರಾಜನಗರದ ಕೊಳ್ಳೇಗಾಲಕ್ಕೆ ಶಿಫ್ಟ್ ಮಾಡಿದ್ದರು. ಕಾರ್ಮಿಕನ ಶವದ ಬಗ್ಗೆ ಮಾಹಿತಿ ಪಡೆಯಲು ಶಾಂತಿಗ್ರಾಮ ಪೊಲೀಸ್ ಕೊಳ್ಳೇಗಾಲಕ್ಕೆ ತೆರಳಿದ್ದರು.
ವಿಷಯ ತಿಳಿದು ಮಧ್ಯ ರಾತ್ರಿ ಕ್ವಾರಿ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ ಹಾಗೂ ಡಿಸಿ ಸತ್ಯಭಾಮ ಭೇಟಿ ನೀಡಿದ್ದರು, ಬಳಿಕ ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.