ನವದೆಹಲಿ: ಲೋಕಸಭೆಯ ಉಪಸಭಾಪತಿ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ಆರಂಭಿಸುವ ತುರ್ತು ಅಗತ್ಯದ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಮೊದಲ ಲೋಕಸಭೆಯಿಂದ ಹದಿನಾರನೇ ಲೋಕಸಭೆಯವರೆಗೆ, ಪ್ರತಿ ಸದನಕ್ಕೂ ಒಬ್ಬ ಉಪಸಭಾಪತಿ ಇದ್ದರು. ಒಟ್ಟಾರೆಯಾಗಿ, ವಿರೋಧ ಪಕ್ಷದ ಸದಸ್ಯರಿಂದ ಉಪಸಭಾಪತಿಯನ್ನು ನೇಮಿಸುವುದು ಸುಸ್ಥಾಪಿತ ಸಂಪ್ರದಾಯವಾಗಿದೆ. ಆದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಈ ಸ್ಥಾನ ಸತತ ಎರಡು ಲೋಕಸಭಾ ಅವಧಿಗೆ ಖಾಲಿಯಾಗಿದೆ.
17ನೇ ಲೋಕಸಭೆಯ ಅವಧಿಯಲ್ಲಿ ಯಾವುದೇ ಉಪಸಭಾಪತಿಯನ್ನು ಆಯ್ಕೆ ಮಾಡಲಾಗಿಲ್ಲ, ಮತ್ತು ಈ ಸಂಬಂಧಿತ ಪೂರ್ವನಿದರ್ಶನವು ಪ್ರಸ್ತುತ ಹದಿನೆಂಟನೇ ಲೋಕಸಭೆಯಲ್ಲೂ ಮುಂದುವರೆದಿದೆ.
ಸಾಂವಿಧಾನಿಕ ಕಳಕಳಿ
ಇದು ಭಾರತದ ಪ್ರಜಾಪ್ರಭುತ್ವ ರಾಜಕೀಯಕ್ಕೆ ಒಳ್ಳೆಯದಲ್ಲ ಮತ್ತು ಸಂವಿಧಾನದ ಉತ್ತಮವಾಗಿ ರೂಪಿಸಲಾದ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
1952 ರಿಂದ 2014ರವರೆಗೆ, ಪ್ರತಿ ಲೋಕಸಭೆಯಲ್ಲಿ ಒಬ್ಬರು ಇದ್ದರು. ಆದರೆ 17ನೇ ಅಥವಾ ಪ್ರಸ್ತುತ 18ನೇ ಲೋಕಸಭೆಯಲ್ಲಿ ಯಾರೂ ನೇಮಕಗೊಂಡಿಲ್ಲ ಎಂದಿದ್ದಾರೆ.
ಸದನದಲ್ಲಿ ಸಾಂವಿಧಾನಿಕ ಸಮತೋಲನವನ್ನು ಪುನಃಸ್ಥಾಪಿಸಲು ಅವರು ಪ್ರಧಾನಿಯನ್ನು ಒತ್ತಾಯಿಸಿದರು.
ಉಪಸಭಾಪತಿ ಆಯ್ಕೆ ಪ್ರಕ್ರಿಯೆ: ಲೋಕಸಭಾ ಉಪಸಭಾಪತಿ ಸ್ಥಾನವನ್ನು ವಿಪಕ್ಷಕ್ಕೆ ಬಿಟ್ಟು ಕೊಡುವ ಸಂಸದೀಯ ಸಂಪ್ರದಾಯವಿದೆ.
ಸಂವಿಧಾನದ ಆರ್ಟಿಕಲ್ 59ರ ಸೆಕ್ಷನ್ 1ರ ಪ್ರಕಾರ ಸ್ಪೀಕರ್ ಅವರ ಹುದ್ದೆ ಖಾಲಿಯಾದಾಗ ಉಪಸಭಾಪತಿ ಅವರು ಸ್ಪೀಕರ್ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಸದನದ ಅಧ್ಯಕ್ಷತೆ ವಹಿಸುತ್ತಿರುವಾಗ ಅವರು ಸ್ಪೀಕರ್ ಗಿರುವ ಎಲ್ಲ ಅಧಿಕಾರವನ್ನು ಹೊಂದಿರುತ್ತಾರೆ.
ಆರ್ಟಿಕಲ್ 93ರ ಪ್ರಕಾರ ಸ್ಪೀಕರ್ ಮತ್ತು ಉಪಸಭಾಪತಿ ಇಬ್ಬರನ್ನು ಸಂಸತ್ತಿನಲ್ಲಿ ಆದಷ್ಟು ಶೀಘ್ರವೇ ನೇಮಿಸಬೇಕು ಎಂದು ಹೇಳಲಾಗಿದೆ. ಲೋಕಸಭೆ ಆದಷ್ಟು ಶೀಘ್ರವೇ ಸದನದ ಇಬ್ಬರು ಸದಸ್ಯರನ್ನು ಕ್ರಮವಾಗಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ.
ಸಾಮಾನ್ಯವಾಗಿ, ಹೊಸ ಸದನದ ಚೊಚ್ಚಲ ಅಧಿವೇಶನದ ಮೂರನೇ ದಿನಕ್ಕೆ ಸ್ಪೀಕರ್ ಅನ್ನು ಆಯ್ಕೆ ಮಾಡಲಾಗುತ್ತದೆ. ಸಂಸತ್ತಿನ ಎರಡನೇ ಅಧಿವೇಶನದಲ್ಲಿ ಉಪಸಭಾಪತಿಯ ಚುನಾವಣೆ ನಡೆಯುತ್ತದೆ.
ಉಪಸಭಾಪತಿ ಸ್ಥಾನದ ಚುನಾವಣೆಗೆ ಸ್ಪೀಕರ್ ಅವರೇ ದಿನಾಂಕ ನಿಕ್ಕಿ ಮಾಡ್ತಾರೆ ಅನ್ನುತ್ತವೆ ನಿಯಮಗಳು. 2004ರಿಂದ 2009ರವರೆಗಿನ ಯುಪಿಎ 1 ಸರಕಾರ ಮತ್ತು 2009ರಿಂದ 2014ರವರೆಗಿನ ಯುಪಿಎ 2 ಅವಧಿಯಲ್ಲಿ ವಿಪಕ್ಷದವರಿಗೆ ಉಪಸಭಾಪತಿಯ ಹುದ್ದೆಯನ್ನು ನೀಡಲಾಗಿತ್ತು.