ಬೆಂಗಳೂರು: ಜಾತ್ಯಾತೀತ ಜನತಾದಳ ಪಕ್ಷದ ಪ್ರಮುಖರ ಸಮಿತಿ (ಕೋರ್ ಕಮಿಟಿ) ಯನ್ನು ಪುನಾರಚನೆ ಮಾಡಲಾಗಿದ್ದು, ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಹಿರಿಯ ನಾಯಕ ಜಿಟಿ ದೇವೇಗೌಡ ಅವರಿಗೆ ಕೊಕ್ ನೀಡಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರು ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ 20 ಸದಸ್ಯರ ಕೋರ್ ಕಮಿಟಿಯನ್ನು ಪುನರಚನೆ ಮಾಡಿದ್ದು, 20 ಸದಸ್ಯರ ಚಿಂತಾಮಣಿಯ ಮಾಜಿ ಶಾಸಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಹಲವು ವರ್ಷಗಳಿಂದ ಅಧ್ಯಕ್ಷರಾಗಿದ್ದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿಟಿ ದೇವೇಗೌಡರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ.
ಮಾಜಿ ಶಾಸಕ ರಾಜವೆಂಕಟಪ್ಳ ನಾಯಕ ದೊರೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಆಲ್ಕೋಡ ಹನುಮಂತಪ್ಪ, ಹೆಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಕೆ.ಎಂ. ತಿಮ್ಮರಾಯಪ್ಪ, ಎ. ಮಂಜುನಾಥ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೆ.ಜಿ. ಪ್ರಸನ್ನಕುಮಾರ್, ಶಾಸಕರಾದ ಕರೆಮ್ಮ ನಾಯಕ, ನೇಮಿರಾಜ ನಾಯಕ, ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಹಿರಿಯ ನಾಯಕ ಸಿ.ವಿ. ಚಂದ್ರಶೇಖರ್ ಅವರನ್ನು ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.


