ಸೊರಬ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ ಪರಶುರಾಮ್ ಎಚ್. ನಾಗರಾಳ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮದ ಶಾಲೆಯ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿ ಪಿಎಂಶ್ರೀ ಯೋಜನೆಯಡಿ 77.59 ಲಕ್ಷ ರೂ. ವೆಚ್ಚದಲ್ಲಿ ಪೂರ್ಣ ಗೊಂಡಿದ್ದು, ಕಾಮಗಾರಿಯ ಬಿಲ್ ಮಂಜೂರು ಮಾಡಲು ಪರಶುರಾಮ್ ಅವರು ಶೇ.3 ಲಂಚ ಕೇಳಿದ್ದರು. ಈ ಮೊದಲು ಪರಶುರಾಮ್ ಅವರು ಲಿಂಗರಾಜಗೆ 1.63 ಲಕ್ಷ ರೂ. ಲಂಚ ನೀಡಿದ್ದರು. ಉಳಿದ 70 ಸಾವಿರ ರೂ. ನೀಡುವಂತೆ ಒತ್ತಾಯಿಸುತ್ತಿದ್ದರು.
ಹಸವಿ ಗ್ರಾಮದ ಗುತ್ತಿಗೆದಾರ ಲಿಂಗರಾಜ ಶಿವಪ್ಪ ಉಳ್ಳಾಗಡ್ಡಿ ಈ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಇನ್ಸ್ಪೆಕ್ಟರ್ ರುದ್ರೇಶ್ ನೇತೃತ್ವದಲ್ಲಿ ತಂಡವೊಂದು ದಾಳಿ ನಡೆಸಿತು. ಪರಶುರಾಮ್ ಎಚ್ 30 ಸಾವಿರ ರೂ. ಶಿರಾಳಕೊಪ್ಪದಲ್ಲಿ ಪಡೆಯುತ್ತಿರುವಾಗಲೇ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ.